ಹಿರಿಯೂರು: ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 5 ಕೆ.ಜಿ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ ₹ 3.5 ಕೋಟಿ ಎಂದು ಅಂದಾಜಿಸಲಾಗಿದೆ.
ನಗರದಲ್ಲಿ ಚೀಲ ಹಿಡಿದು ಅನುಮಾನಸ್ಪದವಾಗಿ ಓಡಾಡುತ್ತಿದ್ದವರನ್ನು ವಿಚಾರಿಸಿದ ಪೊಲೀಸರು, ಬ್ಯಾಗ್ ಪರಿಶೀಲಿಸಿದಾಗ ಚಿನ್ನ ಪತ್ತೆಯಾಗಿದೆ. 18 ಕ್ಯಾರೆಟ್ ಚಿನ್ನದ ದಾಖಲೆ ಹಾಜರುಪಡಿಸಲು ವಿಫಲರಾದ ಮನೋಜ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿನ್ನವನ್ನು ದಾವಣಗೆರೆಯಿಂದ ಹಿರಿಯೂರು ಚಿನ್ನದ ಅಂಗಡಿಗೆ ತರಲಾಗುತ್ತಿತ್ತು ಎನ್ನಲಾಗಿದೆ.
ಮತ್ತೊಂದೆಡೆ ತಾಲ್ಲೂಕಿನ ಮಸ್ಕಲ್ ಬಳಿ ವಾಹನವೊಂದರಲ್ಲಿ ₹ 6.8 ಲಕ್ಷ ನಗದು ಪತ್ತೆಯಾಗಿದೆ. ಚುನಾವಣಾ ಸಿಬ್ಬಂದಿ ಸರಕು ಸಾಗಣೆ ವಾಹನ ಪರಿಶೀಲನೆ ಮಾಡಿದಾಗ ನಗದು ಸಿಕ್ಕಿದೆ.