ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಭದ್ರಾ ಮೇಲ್ದಂಡೆ ಯೋಜನಾ ಪ್ರದೇಶಕ್ಕೆ ಸಂಸದ ಎ. ನಾರಾಯಣಸ್ವಾಮಿ ಭೇಟಿ

ಅಜ್ಜಂಪುರ ರೈಲ್ವೆ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಒತ್ತು
Last Updated 10 ಮೇ 2020, 12:14 IST
ಅಕ್ಷರ ಗಾತ್ರ

ಹಿರಿಯೂರು:ಬಯಲು ಸೀಮೆಯ ಜನರ ದಶಕಗಳ ಕನಸಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಅಡ್ಡಿಯಾಗಿದ್ದ ಅಜ್ಜಂಪುರ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಪೂರ್ಣಗೊಳಿಸುವ ಸಂಬಂಧ ಸಂಸದ ಎ. ನಾರಾಯಣಸ್ವಾಮಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

ಶನಿವಾರ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿದ್ದ ಅವರು ಭದ್ರಾ ಮೇಲ್ದಂಡೆ ಮುಖ್ಯ ಎಂಜಿನಿಯರ್ ರಾಘವನ್, ಅಧೀಕ್ಷಕ ಎಂಜಿನಿಯರ್ ವೇಣುಗೋಪಾಲ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುರೇಶ್, ಮೈಸೂರು ವಿಭಾಗದ ರೈಲ್ವೆ ಇಲಾಖೆ ಅಧಿಕಾರಿಗಳಾದ ರವಿಚಂದ್ರನ್ ಹಾಗೂ ವೆಂಕಟರಾಜು ಅವರೊಂದಿಗೆ ಕಾಮಗಾರಿ ಸಾಧಕ–ಬಾಧಕಗಳ ಬಗ್ಗೆ ಚರ್ಚಿಸಿದ್ದಾರೆ ಎಂದುತಾಲ್ಲೂಕು ಪಂಚಾಯಿತಿ ಸದಸ್ಯ ಯಶವಂತರಾಜು ಮಾಹಿತಿ ನೀಡಿದರು.

ಅಜ್ಜಂಪುರ ರೈಲ್ವೆ ಸೇತುವೆ ಕಾಮಗಾರಿ ಹಿಂದಿನ ವರ್ಷ ಜೂನ್ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ರೈಲು ನಿಲುಗಡೆ ಸೇರಿ ವಿವಿಧ ಕಾರಣಗಳಿಂದ ಅಪೂರ್ಣಗೊಂಡಿತ್ತು. ಕಾಮಗಾರಿ ಸಂಬಂಧ ಸಂಸದರು ಬೆಂಗಳೂರು, ಮೈಸೂರಿನಲ್ಲಿ ಭದ್ರಾ ಮೇಲ್ದಂಡೆ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು.

ಲಾಕ್‌ಡೌನ್ ಕಾರಣಕ್ಕೆ ಪ್ರಯಾಣಿಕರ ರೈಲುಗಳು ಸಂಚರಿಸುತ್ತಿಲ್ಲ. ಆದರೆ ಗೂಡ್ಸ್ ವಾಹನಗಳು ಸಂಚರಿಸುತ್ತಿರುವ ಕಾರಣ ಸೇತುವೆ ಕಾಮಗಾರಿ ಕಷ್ಟ ಎಂದು ಅಧಿಕಾರಿಗಳು ಮಾಹಿತಿ ನೀಡಿದಾಗ, ‘ರೈಲು ನಿಲ್ಲಿಸುವ ಕೆಲಸ ಮಾಡಿಸುತ್ತೇನೆ, ನೀವು ಗುತ್ತಿಗೆದಾರರ ಮೂಲಕ ಕಾಮಗಾರಿ ಪೂರ್ಣಗೊಳಿಸಲು ಸಿದ್ಧತೆ ಮಾಡಿಕೊಳ್ಳಿ’ ಎಂದು ಸೂಚಿಸಿದರು.

‌ಬಳಿಕ ರೈಲ್ವೆ ಸಚಿವ ಸುರೇಶ್ ಅಂಗಡಿಯವರನ್ನು ಭೇಟಿ ಮಾಡಿ, ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಎ.ಕೆ. ಸಿಂಗ್ ಅವರಿಗೆ ಮೇ 15 ರಿಂದ 25 ರವರೆಗೆ ರೈಲು ನಿಲುಗಡೆ ಮಾಡಿಸುವ ಆದೇಶವನ್ನು ತಲುಪಿಸಿದರು. ಇದರಿಂದ ಸೇತುವೆ ಕಾಮಗಾರಿಗೆ ಇದ್ದ ಅಡಚಣೆ ನಿವಾರಣೆ ಆಗಿದೆ. ಮೇ 25 ರ ಒಳಗೆ ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಯಶವಂತರಾಜು ವಿವರಿಸಿದರು.

ಎಂ.ಆರ್. ಸ್ವಾಮಿ, ಭೋಜರಾಜು, ಹಾಲಪ್ಪ, ಉಮಾಪತಿ, ಡಾ.ನಾಗೇಶ್, ಮಲ್ಲಿಕ್ ಸಾಬ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT