ಹಿರಿಯೂರು: ರಫೇಲ್ ಹಗರಣವನ್ನು ಜೆಪಿಸಿ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಗುರುವಾರ ನಗರದ ಅಂಬೇಡ್ಕರ್ ಪುತ್ಥಳಿ ಎದುರು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಫೇಲ್ ಖರೀದಿಯಲ್ಲಿ ಭಾರಿ ಗೋಲ್ಮಾಲ್ ನಡೆದಿರುವ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಂಸತ್ತಿನ ಒಳಗ ಮತ್ತು ಹೊರಗೆ ನಿರಂತರ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಈ ಬಗ್ಗೆ ಮೌನವಾಗಿದ್ದಾರೆ. ಇದು ಅವರು ತಪ್ಪಿತಸ್ಥರು ಎಂಬುದನ್ನು ತೋರಿಸುತ್ತದೆ ಎಂದು ದೂರಿದರು.
ಯುಪಿಎ ಸರ್ಕಾರ ಮಾಡಿಕೊಂಡಿದ್ದ ಒಪ್ಪಂದವನ್ನು ಹೆಚ್ಚಿಸಿರುವುದು ಸಹಜವಾಗಿ ಅನುಮಾನ ಉಂಟು ಮಾಡುತ್ತದೆ. ಇದರ ಹಿಂದಿರುವ ಸತ್ಯವನ್ನು ತಿಳಿಯುವ ಹಕ್ಕು ದೇಶದ ಜನರಿಗಿದೆ ಎಂದು ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಉಲ್ಲಾ ಹೇಳಿದರು.
126 ವಿಮಾನಗಳ ಬದಲಿಗೆ ಕೇವಲ 36 ವಿಮಾನ ಖರೀದಿಸಲು ಮುಂದಾಗಿದ್ದು ಏಕೆ? ರಫೇಲ್ ವಿಮಾನ ಖರೀದಿ ಹಿಂದಿನ ಸತ್ಯ ಹೊರಬರಬೇಕೆಂದರೆ ಜೆಪಿಸಿ ತನಿಖೆ ಮಾಡಲೇಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಸಿಬ್ಗತ್ ಉಲ್ಲಾ ಷರೀಫ್, ಪ್ರಧಾನ ಕಾರ್ಯದರ್ಶಿ ಶಾಹಿದ್, ಎಸ್ ಸಿ ಸೆಲ್ ಉಪಾಧ್ಯಕ್ಷ ಜ್ಞಾನೇಶ್, ಒಬಿಸಿ ಉಪಾಧ್ಯಕ್ಷ ರಘು, ಜಿ. ದಾದಾಪೀರ್, ಸೆಂದಿಲ್, ಗುರು, ಅಯೂಬ್ ಖಾನ್, ಸಲೀಂ, ಘನಿ ಪಾಲ್ಗೊಂಡಿದ್ದರು.