ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆ ಸರಿಪಡಿಸದಿದ್ದರೆ ಸಚಿವರಿಗೆ ಘೇರಾವ್: ಎಚ್ಚರಿಕೆ

Last Updated 16 ಮೇ 2021, 15:13 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಜಿಲ್ಲೆಯಲ್ಲಿನ ಕೋವಿಡ್ ಕೇಂದ್ರಗಳ ಅವ್ಯವಸ್ಥೆ ಸರಿಪಡಿಸದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರಿಗೆ ಘೇರಾವ್ ಹಾಕಲಾಗುವುದು’ ಎಂದು ಕಾಂಗ್ರೆಸ್ ಒಬಿಸಿ ಘಟಕದ ಜಿಲ್ಲಾ ಅಧ್ಯಕ್ಷ ಎನ್.ಡಿ. ಕುಮಾರ್ ಎಚ್ಚರಿಸಿದ್ದಾರೆ.

‘ಜಿಲ್ಲಾ ಆಸ್ಪತ್ರೆ ಆವರಣದ ಕೋವಿಡ್ ಕೇಂದ್ರದ ಅವ್ಯವಸ್ಥೆಯನ್ನು ಕೊರೊನಾ ಸೋಂಕು ತಗುಲಿ ಇಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ವಕೀಲರೊಬ್ಬರು ವಿಡಿಯೊ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅನಾವರಣಗೊಳಿಸಿದ್ದಾರೆ. ಇದು ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ’ ಎಂದು ದೂರಿದ್ದಾರೆ.

‘ಜಿಲ್ಲೆಯ ಅಂಕಿ–ಅಂಶಗಳ ಪ್ರಕಾರ ಕೋವಿಡ್ ನಿಯಂತ್ರಣದಲ್ಲಿದೆ ಎಂಬ ತಪ್ಪು ಮಾಹಿತಿ ನೀಡಲಾಗುತ್ತಿದೆ. ವಾಸ್ತವದಲ್ಲಿ ಕೋವಿಡ್‌ನ ತೀವ್ರತೆ ಹೆಚ್ಚಾಗಿದೆ. ಜಿಲ್ಲೆ ಹಾಗೂ ರಾಜ್ಯದ ವರದಿಯಲ್ಲಿ ಸೋಂಕಿತರ ಸಂಖ್ಯೆ ತಾಳೆಯಾಗುತ್ತಿಲ್ಲ. ಜಿಲ್ಲಾಡಳಿತ ಈ ವಿಚಾರದಲ್ಲಿ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ’ ಎಂದು ಅಸಮಧಾನ ಹೊರಹಾಕಿದ್ದಾರೆ.

‘ಸೋಂಕಿತರ ಸೂಕ್ತ ಚಿಕಿತ್ಸೆಗೆ ಎಲ್ಲ ಕ್ರಮವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರು ಹೇಳುತ್ತಿದ್ದಾರೆ. ಆದರೆ, ಯಾವುದು ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ. ಇದರಿಂದಾಗಿ ನಿತ್ಯ ಕೊರೊನಾ ಸೋಂಕಿತರು ಕೋವಿಡ್ ಕೇಂದ್ರಗಳ ಮುಂಭಾಗ ಆಂಬುಲೆನ್ಸ್‌ನೊಳಗೆ ಹಗಲು–ರಾತ್ರಿ ಕಳೆಯುವ ಸ್ಥಿತಿ ಎದುರಾಗಿದೆ’ ಎಂದು ವ್ಯವಸ್ಥೆಯನ್ನು ದೂಷಿಸಿದ್ದಾರೆ.

‘ಜಿಲ್ಲೆಯನ್ನು ಸಚಿವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಇದರಿಂದಾಗಿ ಜಿಲ್ಲೆಗೆ ಆಮ್ಲಜನಕ ಘಟಕ ಕೈತಪ್ಪಿದೆ. ಎರಡನೇ ಹಂತದಲ್ಲಿ ಜಿಲ್ಲೆಗೆ ಘಟಕ ಬರಲಿದೆ ಎಂದು ಅವರೇ ಹೇಳುತ್ತಿದ್ದಾರೆ. ಅಷ್ಟೊತ್ತಿಗೆ ಹೆಚ್ಚಿನ ಸಾವು–ನೋವು ಸಂಭವಿಸಿದರು ಅಚ್ಚರಿಪಡಬೇಕಿಲ್ಲ. ಐಸಿಯು ವ್ಯವಸ್ಥೆಯ ಜತೆಗೆ ಆಮ್ಲಜನಕ ಸಹಿತ ಹಾಸಿಗೆಗೆ ಎಲ್ಲಿಯೂ ಕೊರತೆ ಉಂಟಾಗದಂತೆ ಕ್ರಮವಹಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT