ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಆದಾಯ ತರುವ ಸೊಗಡವರೆ | ಡಿಸೆಂಬರ್‌ನಲ್ಲಿ ಅವರೆಕಾಯಿ ಸೊಗಡು ವಿಶಿಷ್ಟ

Last Updated 15 ಡಿಸೆಂಬರ್ 2022, 2:49 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನಾದ್ಯಂತ ಹಲವು ಹಳ್ಳಿಗಳಲ್ಲಿ ರಾಗಿ ಅಥವಾ ಮೆಕ್ಕೆಜೋಳ ಹಾಕಿರುವ ಜಮೀನುಗಳ ಎರಡೂ ಬದಿಗಳಲ್ಲಿ ಅವರೆಕಾಯಿ ಗಿಡಗಳನ್ನು ಬೆಳೆಸಲಾಗಿದ್ದು, ರೈತರಿಗೆ ಉತ್ತಮ ಆದಾಯ ತಂದುಕೊಟ್ಟಿದೆ.

‘ಈ ಬಾರಿ ಒಂದು ಎಕರೆಗೆ ಅವರೆ ಗಿಡ ಹಾಕಲಾಗಿದೆ. ಅವರೆ ಗಿಡ ಹಾಕುವ ಮುನ್ನ ಭೂಮಿಯನ್ನು ಒಂದೆರಡು ಬಾರಿ ಉಳುಮೆ ಮಾಡಿ, ಹದ ಮಾಡಬೇಕು. ನಂತರ ಸಾಲು ಹಾಕಿ, ಅದರಂತೆ ಅವರೆ ಬೀಜವನ್ನು ಹಾಕಬೇಕು. ಹೂ ಬಿಡುವ ಹಂತದಲ್ಲಿ ಔಷಧ ಸಿಂಪಡಣೆ ಮಾಡಬೇಕು. ಕಾಯಿ ಉತ್ಕೃಷ್ಟವಾಗಿ ಬರುತ್ತದೆ. ಅವರೆ ಆರು ತಿಂಗಳ ಬೆಳೆಯಾಗಿದ್ದು. ಹೊಸದುರ್ಗದ ಮಾರುಕಟ್ಟೆಗೆ ರವಾನಿಸಲಾಗುತ್ತದೆ. ಕೆ.ಜಿ.ಗೆ ₹ 30ರಂತೆ ವರ್ತಕರು ಖರೀದಿಸುತ್ತಾರೆ. ಹೂ ಬಿಡುವ ಹಂತದಲ್ಲಿ ಔಷಧಕ್ಕೆ ಮಾತ್ರ ಹಣ ಖರ್ಚಾಗುತ್ತದೆ. ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯ ಗಳಿಸಬಹುದು’ ಎನ್ನುತ್ತಾರೆ ಕೆಂಕೆರೆ ರೈತ ಹರೀಶ್.

‘ಅವರೆಕಾಯಿಗೆ ಬೇಡಿಕೆಯಿರುವ ಕಾರಣ ಎಲ್ಲ ಸಮಯದಲ್ಲೂ ಬೆಳೆಯುತ್ತೇವೆ. ಆದರೆ ಡಿ‌ಸೆಂಬರ್‌ನಲ್ಲಿರುವ ಅವರೆಕಾಯಿ ಸೊಗಡು (ವಿಶಿಷ್ಟ ಪರಿಮಳ) ಇತರ ದಿನಗಳಲ್ಲಿ ಇರುವುದಿಲ್ಲ. ಮಂಜು ಮುಸುಕಿನ ವಾತಾವರಣ ವಿದ್ದರೇ ಅವರೆ ಉತ್ಕೃಷ್ಟವಾಗಿ ಬೆಳೆಯುತ್ತದೆ. ಡಿಸೆಂಬರ್‌ನಲ್ಲಿ ಅವರೆಕಾಳಿಗೆ ಬಹಳ ಬೇಡಿಕೆ’ ಎನ್ನುತ್ತಾರೆ ರೈತ ಲೋಹಿತ್.

‘ಅವರೆಕಾಯಿಯನ್ನು ರಾಗಿ ಜೊತೆ ಅಕ್ಕಡಿ (ರಾಗಿ ಮಧ್ಯದಲ್ಲಿ ಸಾಲಿನಲ್ಲಿ ಹಾಕುವುದು)ಯಾಗಿ ಬೆಳೆದಿದ್ದೇನೆ. ಅವರೆಕಾಯಿ ಸೀಸನ್ ನಲ್ಲಿ ₹ 35- ₹ 40 ರಂತೆ ಕೊಂಡು ಕೊಳ್ಳುತ್ತಾರೆ. ಹಲವು ವರ್ಷಗಳಿಂದ ಇದೇ ಪದ್ಧತಿ ಅನುಸರಿಸುತ್ತಿದ್ದು, ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತಂದು ಕೊಡುತ್ತದೆ’ ಎಂದು ವೆಂಗಳಾಪುರದ ಲಿಂಗರಾಜು ತಿಳಿಸಿದರು.

ಅವರೆಕಾಯಿ ಸಾಂಬಾರ್, ಅವರೆಕಾಳು ಉಪ್ಪಿಟ್ಟು, ಅವರೆಕಾಳು ಮಂಡಕ್ಕಿ, ಅವರೆಕಾಳು ಅವಲಕ್ಕಿ ತಿಂಡಿ, ಅವರೆಕಾಳು ಪಲ್ಯ ಹೀಗೆ ವಿವಿಧ ಅಡುಗೆಗಾಗಿ ಈ ಸಮಯದಲ್ಲಿ ಅವರೆ ಕೊಳ್ಳಲು ಹಲವರು ಮಾರುಕಟ್ಟೆಯಲ್ಲಿ ಧಾವಿಸುವುದುಂಟು. ಇನ್ನೊಂದೆರಡು ತಿಂಗಳು ಇದರದ್ದೇ ದರ್ಬಾರ್‌.

100 ಹೆಕ್ಟೇರ್‌ ಪ್ರದೇಶದಲ್ಲಿ ಅವರೆ

ತಾಲ್ಲೂಕಿನಲ್ಲಿ ಅವರೆಕಾಳನ್ನು ರಾಗಿ ಮಧ್ಯೆ ಮಿಶ್ರ ಬೆಳೆಯಾಗಿ ಬೆಳೆಯುತ್ತಾರೆ. ಕಸಬಾ ಹಾಗೂ ಶ್ರೀರಾಂಪುರ ಹೋಬಳಿ ಸೇರಿದಂತೆ ತಾಲ್ಲೂಕಿನಾದ್ಯಂತ 100 ಹೆಕ್ಟೇರ್‌ ಪ್ರದೇಶದಲ್ಲಿ ಅವರೆ ಬೆಳೆಯಲಾಗಿದೆ.

ಈ ಬೆಳೆಗೆ ಕಾಯಿಕೊರಕ ಹುಳು ಮತ್ತು ಸಸ್ಯ ಹೇನು ಹೆಚ್ಚಾಗಿ ಕಂಡು ಬರುತ್ತದೆ. ಇದನ್ನು ತಪ್ಪಿಸಲು ಅವರೆಕಾಯಿ ಹೂ ಬಿಡುವ ಹಂತದಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ದೊರೆಯುವ ಬೇವಿನ ಎಣ್ಣೆಯನ್ನು 1 ಲೀಟರ್ ನೀರಿಗೆ 2-3 ಎಂ.ಎಲ್ ಹಾಕಿ ಸಿಂಪಡಣೆ ಮಾಡಬೇಕು.

ಅವರೆಕಾಯಿ ಹೂ ಮೇಲೆ ಮೊಟ್ಟೆ ಇಡಲು ಬರುವ ಚಿಟ್ಟೆಗಳು ಇದರ ವಾಸನೆಗೆ ಹತ್ತಿರ ಬರುವುದಿಲ್ಲ. ಕಾಯಿಯಾಗುವ ಹಂತದಲ್ಲಿ ಕಾಯಿಕೊರಕ ಹುಳು ನಿಯಂತ್ರಿಸಲು 0.5-1 ಗ್ರಾಂ. ಹೆಮಾಕ್ಟೀನ್ ಬೆನ್ ಜೊಯೇಟ್ ಅನ್ನು 1 ಲೀಟರ್ ನೀರಿಗೆ ಹಾಕಿ ಸಿಂಪಡಣೆ ಮಾಡಬೇಕು ಆಗ ರೋಗ ನಿಯಂತ್ರಣಕ್ಕೆ ಬರುತ್ತದೆ’ ಎನ್ನುತ್ತಾರೆ.

– ಸಿ.ಎಸ್. ಈಶ, ಸಹಾಯಕ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT