ಹಿರಿಯೂರು: ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸ್ನಾನದ ಕೊಠಡಿಯಲ್ಲಿ ಹೆರಿಗೆ ಮಾಡಿಸಿ, ನವಜಾತ ಶಿಶುವನ್ನು ಹತ್ಯೆಗೈದು ಕಿಟಕಿಯಿಂದ ಹೊರಗೆ ಎಸೆದು ಪರಾರಿಯಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಗುರುವಾರ ಸಂಜೆ 7 ಗಂಟೆ ಸಮಯದಲ್ಲಿ ಒಬ್ಬ ಪುರುಷ ಹಾಗೂ ಮೂವರು ಮಹಿಳೆಯರು (ಗರ್ಭಿಣಿ ಸೇರಿ) ಆಸ್ಪತ್ರೆಯ ಒಳಗೆ ಪ್ರವೇಶಿಸಿದ್ದಾರೆ. ಆ ಸಮಯದಲ್ಲಿ ಜಿಟಿಜಿಟಿ ಮಳೆ ಬರುತ್ತಿದ್ದ ಕಾರಣಕ್ಕೆ ತುರ್ತು ಚಿಕಿತ್ಸಾ ಕೊಠಡಿ ಹೊರತುಪಡಿಸಿದರೆ ಬೇರೆಡೆ ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಇರಲಿಲ್ಲ.
ಆಸ್ಪತ್ರೆಯಲ್ಲಿ ಜನರು ವಿರಳವಾಗಿರುವುದನ್ನು ಗಮನಿಸಿದ ಅವರು, ವಾರ್ಡ್ನೊಳಗೆ ತೆರಳಿ ಅಲ್ಲಿನ ಸ್ನಾನದ ಕೊಠಡಿಯಲ್ಲೇ ಹೆರಿಗೆ ಮಾಡಿಸಿ ನವಜಾತ ಶಿಶುವನ್ನು ಹತ್ಯೆ ಮಾಡಿ ಕಿಟಕಿಯಿಂದ ಹೊರಗೆ ಎಸೆದು ಅಲ್ಲಿಂದ ಪರಾರಿಯಾಗಿದ್ದಾರೆ.
ಮಳೆ ಬರುತ್ತಿದ್ದ ಕಾರಣಕ್ಕೆ ಬಿಸಾಡಿ ಹೋಗಿದ್ದ ಮಗುವನ್ನು ಯಾರೂ ಗಮನಿಸಿಲ್ಲ. ಇದು ಸಿ.ಸಿ. ಕ್ಯಾಮೆರಾದಲ್ಲಿ ದಾಖಲಾಗಿದೆ.
ಬೆಳಿಗ್ಗೆ 6 ಗಂಟೆಯ ವೇಳೆಗೆ ಸಾರ್ವಜನಿಕರು ನವಜಾತ ಶಿಶುಯ ಬಿದ್ದಿರುವುದು ಗಮನಕ್ಕೆ ಬಂದಿದೆ.
ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಿ.ಸಿ. ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.