ಚಳ್ಳಕೆರೆ: ಬಯಲುಸೀಮೆ ಪ್ರದೇಶವನ್ನು ಹಸಿರೀಕರಣಗೊಳಿಸಲು ಅರಣ್ಯೀಕರಣ ಯೋಜನೆಯಡಿ ಬೆಳೆಸಿರುವ ವಿವಿಧ ಬಗೆಯ 1.5 ಲಕ್ಷ ಸಸಿಗಳನ್ನು ಅತ್ಯಂತ ಕಡಿಮೆ ದರದಲ್ಲಿ ವಿತರಿಸಲಾಗುವುದು ಎಂದು ತಾಲ್ಲೂಕು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಡಿ. ಬಹುಗುಣ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ಯಾಗ, ಹೊನ್ನೆ, ಬೀಟೆ, ಕಾಡು ಬಾದಾಮಿ, ಶ್ರೀಗಂಧ, ಮರುಗ, ನೇರಳೆ, ಹಲಸು, ಶೀತಾಫಲ, ಹುಣಸೆ, ಬೇವು, ಕಿರುನೆಲ್ಲಿ, ಬೆಟ್ಟದ ನೆಲ್ಲಿ, ಸೀಬೆ, ಹೊಂಗೆ ಮುಂತಾದ ಸಸಿಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
‘2022ರ ನವೆಂಬರ್ನಲ್ಲಿ ಸರ್ಕಾರ ಸಸಿಗಳ ದರ ಹೆಚ್ಚಿಸಿ ಆದೇಶ ಹೊರಡಿಸಿದ್ದ ಕಾರಣ ಸಸಿಗಳ ಖರೀದಿಗೆ ರೈತರು ಆಸಕ್ತಿ ತೋರಿರಲಿಲ್ಲ. ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸಲು ರೈತರು ಹಲವು ಬಾರಿ ಮನವಿ ಸಲ್ಲಿಸಿದ್ದರು. ರೈತರ ಮನವಿಗೆ ಸ್ಪಂದಿಸಿದ ಸರ್ಕಾರ, ಅರಣ್ಯೀಕರಣಕ್ಕೆ ಹಿನ್ನಡೆ ಉಂಟಾಗುತ್ತದೆ ಎಂಬ ಕಾರಣದಿಂದ ಅರಣ್ಯ ಇಲಾಖೆಯಲ್ಲಿ ಬೆಳೆಸಿರುವ ದೊಡ್ಡಪ್ಯಾಕೆಟ್ನ ಪ್ರತಿ ಸಸಿಗೆ ₹ 6 ಮತ್ತು ಚಿಕ್ಕಪ್ಯಾಕೆಟ್ನ ಪ್ರತಿ ಸಸಿಗೆ ₹ 2 ದರದಲ್ಲಿ ವಿತರಿಸಲು ಆದೇಶಿಸಿದೆ. ಹಾಗಾಗಿ, ಅರಣ್ಯ ಇಲಾಖೆಯಲ್ಲಿ ಪಡೆದ ಸಸಿಗಳನ್ನು ತಮ್ಮ ಹೊಲದಲ್ಲಿ ಬೆಳೆಸುವ ಮೂಲಕ ಅರಣ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂದು ರೈತರಲ್ಲಿ ಮನವಿ ಮಾಡಿದರು.
ಪ್ರಾದೇಶಿಕ ಸಾಮಾಜಿಕ ಅರಣ್ಯಾಧಿಕಾರಿ ಬಾಬು, ಅರಣ್ಯಾಧಿಕಾರಿ ವಸಂತ್, ರಾಜೇಶ್, ಚಾಲಕ ಮಂಜುನಾಥ್, ಮಹೇಶ್ ಇದ್ದರು.