ಹೊಸದುರ್ಗ: ಬೆಂಬಲ ಬೆಲೆ ಯೋಜನೆಯಡಿ ಸರ್ಕಾರವು ತಾಲ್ಲೂಕಿನ ರೈತರಿಂದ ರಾಗಿ ಖರೀದಿಸಿದ್ದು, ಕೆಲ ರೈತರಿಗೆ ಮಾತ್ರ ಹಣ ಸಂದಾಯ ಮಾಡಿದೆ. 600ಕ್ಕೂ ಅಧಿಕ ರೈತರಿಗೆ ಹಣ ಸಂದಾಯವಾಗಿಲ್ಲ. ಆಗಸ್ಟ್ 10 ರೊಳಗೆ ತಾಲ್ಲೂಕಿನ ಎಲ್ಲಾ ರೈತರಿಗೂ ಹಣ ಸಂದಾಯವಾಗಬೇಕು. ತಪ್ಪಿದ್ದಲ್ಲಿ ತಹಶೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.
ಬೆಂಬಲ ಬೆಲೆ ಯೋಜನೆಯಡಿ ಜನವರಿಯಿಂದ ಏಪ್ರಿಲ್ವರೆಗೂ ರಾಗಿ ಖರೀದಿ ಮಾಡಲಾಗಿದೆ. ತಾಲ್ಲೂಕಿನ 600 ಜನರಿಗೆ ಗ್ರೈನ್ ವೋಚರ್ ನೀಡಿದೆ. ಬಿಳಿ ಹಾಳೆಯಲ್ಲಿ ಮಾಹಿತಿ ಬರೆಯಲಾಗಿತ್ತು. ಅಂತಹ ರೈತರ ಖಾತೆಗೆ ಹಣ ಸಂದಾಯವಾಗಿಲ್ಲ. ಇನ್ನೂ 150 ಜನರಿಗೆ ಗ್ರೈನ್ ವೋಚರ್ ಇದ್ದರೂ ಹಣ ಸಂದಾಯವಾಗಿಲ್ಲ. ಈ ಧೋರಣೆ ಖಂಡಿಸಿ ಆಗಸ್ಟ್ 10ರಿಂದ ತಹಶೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು. ಕೂಡಲೇ ತಹಶೀಲ್ದಾರ್ ಅವರು ಈ ಬಗ್ಗೆ ಗಮನಹರಿಸಿ ಹಣ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕು ಅಧ್ಯಕ್ಷ ಬೋರೇಶ್, ಗೌರವಾಧ್ಯಕ್ಷ ಮಹೇಶ್ವರಪ್ಪ, ಕಾರ್ಯದರ್ಶಿ ಅರೇನಹಳ್ಳಿ ಶಶಿಧರ್, ಸಹ ಕಾರ್ಯದರ್ಶಿ ರಘು, ವೇದಮೂರ್ತಿ, ಅರಲಹಳ್ಳಿ ಶಶಿಧರ್, ಮಳಲಿ ಪ್ರಕಾಶ್, ಹರೀಶ್ ಮಳಲಿ ಇದ್ದರು.