ಚಿತ್ರದುರ್ಗ: ಮುರುಘಾ ಮಠದ ಆಡಳಿತ ಹಾಗೂ ಅದರ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿಯ ಬಗ್ಗೆ ರಾಜ್ಯ ಸರ್ಕಾರ ವರದಿ ಕೇಳಿದ್ದು, ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜಿ ಅವರು ಶನಿವಾರ ಅಗತ್ಯ ಮಾಹಿತಿ ಕಲೆಹಾಕಿದ್ದಾರೆ.
ಚಿನ್ಮುಲಾದ್ರಿ ಶ್ರೀಜಗದ್ಗುರು ಮುರುಘರಾಜೇಂದ್ರ ಟ್ರಸ್ಟ್ ಹಾಗೂ ಎಸ್ಜೆಎಂ ವಿದ್ಯಾಪೀಠದ ಆಡಳಿತಾತ್ಮಕ ವಿಚಾರಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಕಂದಾಯ ಇಲಾಖೆಯು ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ. ಈ ಸೂಚನೆಯ ಪತ್ರ ಶುಕ್ರವಾರವಷ್ಟೇ ಜಿಲ್ಲಾಧಿಕಾರಿ ಕೈಸೇರಿತ್ತು.
ದಿವ್ಯ ಪ್ರಭು ಅವರು ಶನಿವಾರ ಮುರುಘಾ ಮಠಕ್ಕೆ ಭೇಟಿ ನೀಡಿ ಟ್ರಸ್ಟ್ಗೆ ಸಂಬಂಧಿಸಿದ ಅಗತ್ಯ ದಾಖಲೆ ಹಾಗೂ ಮಾಹಿತಿ ಕೇಳಿದ್ದಾರೆ. ಎಸ್ಜೆಎಂ ವಿದ್ಯಾಪೀಠದ ಅಧೀನದಲ್ಲಿರುವ ಚಂದ್ರವಳ್ಳಿ ಪದವಿ ಕಾಲೇಜಿಗೆ ತೆರಳಿ ಕಾರ್ಯವೈಖರಿ, ವೇತನ, ನೇಮಕಾತಿ ಕುರಿತಾದ ಮಾಹಿತಿ ಕಲೆಹಾಕಿದ್ದಾರೆ.
ಪ್ರೌಢಶಾಲೆ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಬಂಧಿಸಿದ ಬಳಿಕ ಪೀಠತ್ಯಾಗಕ್ಕೆ ಒತ್ತಡ ಸೃಷ್ಟಿಯಾಗಿದೆ. ಮಾಜಿ ಸಚಿವ ಎಚ್.ಏಕಾಂತಯ್ಯ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರ ನಿಯೋಗ ಈಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸರ್ಕಾರದ ಮಧ್ಯಪ್ರವೇಶಕ್ಕೆ ಮನವಿ ಮಾಡಿತ್ತು.