ಚಿತ್ರದುರ್ಗ: ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸಲು ಕೇಂದ್ರ ಜಲಸಂಪನ್ಮೂಲ ಇಲಾಖೆ ಆಹ್ವಾನಿಸಿದ ‘ಜಲ್ ಬಚಾವೊ– ವಿಡಿಯೊ ಬನಾವೊ– ಪುರಸ್ಕಾರ್ ಪಾವೊ’ ಅಭಿಯಾನದ ಮೂರನೇ ಆವೃತ್ತಿಯ ಪ್ರಥಮ ಬಹುಮಾನಕ್ಕೆ ಚಿತ್ರದುರ್ಗದ ಜಲತಜ್ಞ ಎನ್.ಜೆ.ದೇವರಾಜ ರೆಡ್ಡಿ ಭಾಜನರಾಗಿದ್ದಾರೆ.
ಜಲಸಂರಕ್ಷಣೆಗೆ ಸಂಬಂಧಿಸಿದಂತೆ ವಿಡಿಯೊಂದನ್ನು ರೂಪಿಸಿ ಅವರು ಯೂಟ್ಯೂಬ್ಗೆ ಹಾಕಿದ್ದರು. ಈ ವಿಡಿಯೊಗೆ ₹ 25 ಸಾವಿರ ನಗದು ಬಹುಮಾನ ಘೋಷಿಸಿ ಕೇಂದ್ರ ಸಚಿವಾಲಯ ಮಂಗಳವಾರ ಪ್ರಕಟಣೆ ನೀಡಿದೆ.
ಜುಲೈ 10ರಿಂದ ನವೆಂಬರ್ 4ರವರೆಗೆ ಈ ಅಭಿಯಾನ ನಡೆಯುತ್ತಿದೆ. ದೇವರಾಜ ರೆಡ್ಡಿ ಅವರು ಜೀವಜಲ ಸಂರಕ್ಷಣೆಯ ವಿಡಿಯೊ ರೂಪಿಸಿ ಅದನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡಿದ್ದರು. ಆ.9ರಿಂದ 23ರ ಅವಧಿಯ ಸ್ಪರ್ಧೆಯಲ್ಲಿ ಈ ವಿಡಿಯೊ ಆಯ್ಕೆಯಾಗಿದೆ.
ಜಲಸಂರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಮ್ಮಿಕೊಳ್ಳುವ ತರಬೇತಿ ಹಾಗೂ ಕಾರ್ಯಾಗಾರಗಳಲ್ಲಿ ಪ್ರಶಸ್ತಿ ವಿಜೇತ ವಿಡಿಯೊಗಳನ್ನು ಸರ್ಕಾರ ಬಳಸಿಕೊಳ್ಳಲಿದೆ. ಪ್ರಶಸ್ತಿ ರೂಪಿಸಿದವರ ಚಿಂತನೆಯೂ ಇದರೊಂದಿಗೆ ಜನಪ್ರಿಯಗೊಳ್ಳಲಿದೆ.