ಚಿತ್ರದುರ್ಗ: ಸರ್ಕಾರಿ ಪಬ್ಲಿಕ್ ಶಾಲೆಗಳಲ್ಲಿ ‘ಎಲ್ಕೆಜಿ, ಯುಕೆಜಿ ತರಗತಿ’ ನಡೆಸುವ ಬದಲು ಅಂಗನವಾಡಿಗಳಲ್ಲೇ ಆರಂಭಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಜಿಲ್ಲಾ ಮಂಡಳಿ ಕಾರ್ಯಕರ್ತೆಯರು ಸೋಮವಾರ ಪ್ರತಿಭಟನೆ ನಡೆಸಿದರು.
ಮುಖ್ಯರಸ್ತೆ ಮಾರ್ಗಗಳಲ್ಲಿ ಮೆರವಣಿಗೆ ನಡೆಸಿದರು. ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ ಮೂಲಕ ಮನವಿ ರವಾನಿಸಿದರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ಸುರೇಶ್ಬಾಬು, ‘ಐಸಿಡಿಎಸ್ ಯೋಜನೆ ಉಳಿಸಬೇಕು. ಪ್ರಾಥಮಿಕ ಶಾಲೆಗೆ ದಾಖಲಾಗಲು ಅಂಗನವಾಡಿ ಕೇಂದ್ರಗಳಿಂದಲೇ ವರ್ಗಾವಣೆ ಪತ್ರ ನೀಡುವಂತೆ ಆದೇಶಿಸಬೇಕು’ ಎಂದು ಒತ್ತಾಯಿಸಿದರು.
‘ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮರಣ ಹೊಂದಿದಾಗ ಅವರ ಮಗಳಿಗೆ ಅನುಕಂಪದ ಆಧಾರದ ಮೇಲೆ ಹುದ್ದೆ ನೀಡಬೇಕು. ಕೊರೊನಾ ವಾರಿಯರ್ ಎಂಬುದಾಗಿ ಪರಿಗಣಿಸಿ, ಮೃತಪಟ್ಟ ಸಂದರ್ಭದಲ್ಲಿ ₹ 30 ಲಕ್ಷ ವಿಮೆಯನ್ನು ತುರ್ತಾಗಿ ನೀಡಬೇಕು. ಪಿಂಚಣಿ ಯೋಜನೆ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.
ಜಮುನಾಬಾಯಿ, ಸಾವಿತ್ರಮ್ಮ, ರತ್ನಮ್ಮ, ರಾಧಮ್ಮ, ಭಾಗ್ಯಮ್ಮ, ವಿನೋಧಮ್ಮ, ಟಿ.ಆರ್. ಉಮಾಪತಿ, ಸತ್ಯಕೀರ್ತಿ ಇದ್ದರು.