ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬರಿಗೆ ಬದುಕು, ಇನ್ನೊಬ್ಬರಿಗೆ ಉಪವಾಸ: ಮಾದಾರ ಚನ್ನಯ್ಯ ಸ್ವಾಮೀಜಿ

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
Last Updated 3 ಸೆಪ್ಟೆಂಬರ್ 2020, 20:37 IST
ಅಕ್ಷರ ಗಾತ್ರ

ಆದರೆ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಇದಕ್ಕೆ ವ್ಯತಿರಿಕ್ತವಾದ ನಿಲುವು ಹೊಂದಿದ್ದಾರೆ. ಧ್ವನಿ ಇದ್ದವರಷ್ಟೇ ಸೌಲಭ್ಯ ಪಡೆದುಕೊಂಡರೆ ಜಾತಿಗಳ ನಡುವೆ ಕಂದಕ ನಿರ್ಮಾಣ ಆಗಬಹುದು. ಆ ಕಾರಣಕ್ಕೆ ಒಳಮೀಸಲಾತಿ ಅಗತ್ಯ ಎಂಬುದು ಅವರ ಪ್ರತಿಪಾದನೆ.

ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಬೇಕು ಎಂಬುದನ್ನು ಗಟ್ಟಿ ಧ್ವನಿಯಲ್ಲಿ ಕೇಳುತ್ತಿರುವುದು ಏಕೆ?

ಆರಂಭದ ದಿನಗಳಲ್ಲಿ ಮೀಸಲಾತಿ ಪರಿಕಲ್ಪನೆ ಭಿನ್ನವಾಗಿತ್ತು. ಯಾರೊಬ್ಬರೂ ಸಾಮಾಜಿಕ ನ್ಯಾಯದಿಂದ ವಂಚಿತರಾಗಬಾರದು ಹಾಗೂ ಸಂವಿಧಾನಬದ್ಧ ಹಕ್ಕು ಎಲ್ಲರಿಗೂ ತಲುಪಬೇಕು ಎಂಬ ಕಾಳಜಿ ಇತ್ತು. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಬಲಾಢ್ಯರು ಸಹಜವಾಗಿಯೇ ಮೀಸಲಾತಿಯ ಬಹುಪಾಲು ಪಡೆಯತೊಡಗಿದರು. ಧ್ವನಿ ಇಲ್ಲದವರು ಮತ್ತೆ ವಂಚನೆಗೆ ಒಳಗಾಗತೊಡಗಿದರು. ಇದು ಅರ್ಥವಾದ ಬಳಿಕ ಒಳಮೀಸಲಾತಿ ಹೋರಾಟ ಹುಟ್ಟಿಕೊಂಡಿತು.

ಹಾಗಾದರೆ ಡಾ.ಬಿ.ಆರ್‌.ಅಂಬೇಡ್ಕರ್‌ ರೂಪಿಸಿದ ಮೀಸಲಾತಿ ಪರಿಕಲ್ಪನೆಯ ಉದ್ದೇಶ ಇನ್ನೂ ಈಡೇರಿಲ್ಲವೇ?

ಇಷ್ಟು ಸರಳವಾಗಿ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಹತ್ತು ಜನರಿಗೂ ಒಂದೇ ಕೆ.ಜಿ ಅಕ್ಕಿ, ಇಬ್ಬರಿಗೂ ಒಂದೇ ಕೆ.ಜಿ ಅಕ್ಕಿ ಸಿ→ಗುತ್ತಿದೆ ಎಂಬುದು ಇತ್ತೀಚೆಗೆ ಅರ್ಥವಾಗಿದೆ. ಧ್ವನಿ ಉಳ್ಳವರು ಮೀಸಲಾತಿಯ ಬಹುಪಾಲನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಧ್ವನಿಹೀನರು ಸೌಲಭ್ಯ ಪಡೆಯಲು ಇನ್ನೂ ಪರದಾಡುತ್ತಿದ್ದಾರೆ. ಇದು ಸಾಮಾಜಿಕ ಅಂತರ ಸೃಷ್ಟಿಸುವ ಅಪಾಯವಿದೆ. ಕಂದಕ ನಿರ್ಮಾಣವಾಗಬಾರದು ಎಂಬ ಕಾಳಜಿಯಿಂದ ಮೀಸಲಾತಿ ವರ್ಗೀಕರಣದ ಬೇಡಿಕೆಯನ್ನು ಮುಂದಿಡುತ್ತಿದ್ದೇವೆ.

ಒಳಮೀಸಲಾತಿ ಪರಿಕಲ್ಪನೆ ಕೂಡ ಸಂವಿಧಾನಬಾಹಿರ ಎಂಬ ಅಭಿಪ್ರಾಯವನ್ನು ಕಾನೂನು ತಜ್ಞರು ಮುಂದಿಡುತ್ತಿದ್ದಾರಲ್ಲಾ?

ಸರ್ವರಿಗೂ ಸಮಪಾಲು ಸಿಗಬೇಕು ಎನ್ನುವುದು ಅಂಬೇಡ್ಕರ್‌ ರೂಪಿಸಿದ ಸಂವಿಧಾನದ ಆಶಯ. ಈ ಆಶಯ ಈಡೇರದೇ ಇದ್ದಾಗ ಸೌಲಭ್ಯ ಕೇಳುವುದರಲ್ಲಿ ತಪ್ಪೇನಿದೆ? ತಳ ಸಮುದಾಯಕ್ಕೆ ಮೀಸಲಾತಿಯ ಫಲ ಸಿಗದೇ ಇದ್ದರೆ ಸಂವಿಧಾನದ ಆಶಯ ಈಡೇರಲು ಸಾಧ್ಯವಿಲ್ಲ. ಮೀಸಲಾತಿಯನ್ನು ಕೆಲವು ಜಾತಿಗೆ ಸೀಮಿತಗೊಳಿಸಿ ಅನುಭವಿಸುತ್ತಿರುವುದು ಅಂಬೇಡ್ಕರ್‌ ಆಶಯಗಳಿಗೆ ವಿರುದ್ಧವೇ. ಒಬ್ಬರು ಬದುಕಬೇಕು, ಮತ್ತೊಬ್ಬರು ಉಪವಾಸ ಇರಬೇಕು ಎಂಬುದು ಸಂವಿಧಾನಬಾಹಿರ ಅಲ್ಲವೇ?

ಪ್ರಬಲ ಒಳಪಂಗಡಗಳು ಒಳಮೀಸಲಾತಿ ಸೌಲಭ್ಯವನ್ನೂ ಕಬಳಿಸುವ ಸಾಧ್ಯತೆ ಇದ್ದು, ಶಾಶ್ವತ ಪರಿಹಾರವಾಗಲಾರದು ಎಂಬ ವಾದ ಇದೆಯಲ್ಲಾ?

‘ಕಬಳಿಸುವ’ ಪದವನ್ನು ನಾನು ಬಳಕೆ ಮಾಡುವುದಿಲ್ಲ. ಈಗಿರುವ ತಾರತಮ್ಯಕ್ಕೆ ಪರಿಹಾರ ಕಂಡುಕೊಳ್ಳುವ ಜರೂರು ಇದೆ. ಮುಂದೆ ಈ ತಪ್ಪು ಆಗಬಾರದು ಎಂಬ ಕಾಳಜಿಯೂ ವರ್ಗೀಕರಣದಲ್ಲಿದೆ. ಕಾಲಘಟ್ಟಕ್ಕೆ ಅನುಗುಣವಾಗಿ ಪ್ರಸ್ತುತತೆಯೂ ಬದಲಾಗಬಹುದು. ನಾಳೆ ನಮಗೆ ಏನು ಬೇಕೊ, ನಾಡಿದ್ದು ಅದು ಬೇಕಾಗದೇ ಇರಬಹುದು. ನಾಳೆಯ ಬಗ್ಗೆ ಯೋಚನೆ ಮಾಡಿ ಮೀಸಲಾತಿ ವರ್ಗೀಕರಣವನ್ನು ಮುಂದಿಡಲಾಗಿದೆ. ಸದಾಶಿವ ಆಯೋಗದಲ್ಲಿ ಎಡಗೈ, ಬಲಗೈ, ಸ್ಪೃಶ್ಯ ಜಾತಿ ಹಾಗೂ ಅಲೆಮಾರಿಗಳಿಗೆ ಮೀಸಲಾತಿ ಪ್ರಮಾಣ ನಿಗದಿ ಮಾಡಲಾಗಿದೆ. ಇದರಲ್ಲಿ ಯಾರಿಗೂ ಅನ್ಯಾಯವಾಗಲು ಸಾಧ್ಯವೇ ಇಲ್ಲ.

ಒಳಮೀಸಲಾತಿ ಚರ್ಚೆ ಮುನ್ನೆಲೆಗೆ ಬಂದಾಗ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯ ಪ್ರಸ್ತಾಪವಾಗುತ್ತದೆ. ‘ಎಡಗೈ’ ಸಮುದಾಯದವರೇ ಸಮಾಜ ಕಲ್ಯಾಣ ಸಚಿವರಾದರೂ ವರದಿ ಜಾರಿಗೆ ಬರಲು ಏಕೆ ವಿಳಂಬ?

ಯಾವುದೇ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ತಕ್ಷಣಕ್ಕೆ ಅನು ಷ್ಠಾನಕ್ಕೆ ಬಂದಿಲ್ಲ. ಸರ್ಕಾರ ಎಲ್ಲರ ಅಭಿಪ್ರಾಯ ಪಡೆಯಬೇಕಾಗುತ್ತದೆ. ಆರಂಭದಲ್ಲಿ ವರದಿಗೆ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾದವು. ಪರಿಸ್ಥಿತಿ ಈಗ ಬದಲಾಗಿದೆ. ಆಯೋಗಕ್ಕೆ ₹ 12 ಕೋಟಿ ಅನುದಾನ ನೀಡಿ ಅಧ್ಯಯನಕ್ಕೆ ಸಹಕರಿಸಿದ್ದ ಬಿ.ಎಸ್‌.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಸುಪ್ರೀಂ ಕೋರ್ಟ್‌ ಕೂಡ ಒಳಮೀಸಲಾತಿ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಸದಾಶಿವ ಆಯೋಗದ ವರದಿ ಜಾರಿಗೆ ಇದು ಸಕಾಲ.

‘ಕೆನೆಪದರ ಪರಿಕಲ್ಪನೆ’ಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೂ ವಿಸ್ತರಿಸುವ ಮತ್ತೊಂದು ಚರ್ಚೆ ಆರಂಭವಾಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಕೆನೆಪದರಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ರೋಹಿಣಿ ಆಯೋಗವನ್ನು ಕೇಂದ್ರ ರಚನೆ ಮಾಡಿದೆ. ಈ ಆಯೋಗ ಶೀಘ್ರವೇ ವರದಿ ನೀಡುವ ಸಾಧ್ಯತೆ ಇದೆ. ಒಳಮೀಸಲಾತಿ ಹಾಗೂ ಕೆನೆಪದರ ಪರಿಕಲ್ಪನೆ ಬೇಗ ಅನುಷ್ಠಾನಕ್ಕೆ ಬರಲಿ ಎಂಬುದೇ ನಮ್ಮ ಆಶಯ.

ಸದಾಶಿವ ಆಯೋಗದ ವರದಿ ಅನುಷ್ಠಾನ ಹಾಗೂ ಒಳಮೀಸಲಾತಿಗೆ ಸಂಬಂಧಿಸಿದಂತೆ ಮುಂದಿನ ಹೋರಾಟದ ರೂಪುರೇಷೆ ಏನು?

ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ ಭಾಗವತ್‌ ಅವರು ಒಳಮೀಸಲಾತಿ ಪರವಾಗಿದ್ದಾರೆ. ಸಂಘ ಪರಿವಾರದ ಹಲವು ನಾಯಕರೊಂದಿಗೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಮಾದಿಗ ಸಮುದಾಯದ ನೋವನ್ನು ಮುಕ್ತ ಮನಸ್ಸಿನಿಂದ ಆಲಿಸಿದ್ದಾರೆ. ಸದಾಶಿವ ಆಯೋಗದ ವರದಿ ಜಾರಿಯಾಗುತ್ತದೆ ಹಾಗೂ ಒಳಮೀಸಲಾತಿ ಸಿಗುತ್ತದೆ ಎಂಬ ಬಲವಾದ ನಂಬಿಕೆ ಇದೆ.

ಜನಸಂಖ್ಯೆ ಆಧಾರಿತ ಮೀಸಲಾತಿ ವರ್ಗೀಕರಣ ಉಪಜಾತಿಯಲ್ಲಿನ ಬಹುಸಂಖ್ಯಾತರು ಇನ್ನಷ್ಟು ಪ್ರಬಲರಾಗಲು ಅಸ್ತ್ರವಾಗುವುದಿಲ್ಲವೇ?

ಉಪಜಾತಿಯಲ್ಲಿನ ಬಹುಸಂಖ್ಯಾತರು ಇನ್ನಷ್ಟು ಪ್ರಬಲರಾಗುವುದು ಸುಳ್ಳು. ಜಾತಿ ಜನಸಂಖ್ಯೆಗೆ ಅನುಗುಣವಾಗಿ ಪ್ರಬಲರಾಗಬಹುದು. ಇಲ್ಲವಾದರೆ, ದುರ್ಬಲರ ಸೌಲಭ್ಯಗಳನ್ನು ಪ್ರಬಲರೇ ಅನುಭವಿಸುತ್ತಾರೆ. ಇದರಿಂದ ಯಾರಿಗೂ ನ್ಯಾಯ ಸಿಗಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT