ಚಿತ್ರದುರ್ಗ: ನೇತಾಜಿ ಸುಭಾಷ್ಚಂದ್ರ ಬೋಸ್ ಅವರ 122ನೇ ಜನ್ಮದಿನಾಚರಣೆ ಅಂಗವಾಗಿ ಗುರುವಾರ ನಗರದ ವಿವಿಧೆಡೆ ಪ್ರಭಾತ್ ಪೇರಿ ನಡೆಸಲಾಯಿತು.
ಎಐಡಿಎಸ್ಒ, ಎಐಡಿವೈಒ, ಎಐಎಂಎಸ್ಎಸ್ ಸಂಘಟನೆ, ವಿವಿಧ ಶಾಲೆಯ ಮಕ್ಕಳು ನೇತಾಜಿಗೆ ಜೈಕಾರ ಕೂಗುತ್ತಾ ಕಾಮನಬಾವಿ ಬಡಾವಣೆಯಿಂದ ಪ್ರಭಾತ್ ಪೇರಿ ಆರಂಭಿಸಿದರು.
ರಸ್ತೆ ಮಾರ್ಗಗಳಲ್ಲಿ ನೇತಾಜಿ ಭಾವಚಿತ್ರದೊಂದಿಗೆ ಮಕ್ಕಳು ಸಂಚರಿಸುವಾಗ ‘ನೇತಾಜಿ ನೆನಪು ಅಮರವಾಗಲಿ’, ‘ನೇತಾಜಿ ವಿಚಾರಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕು’, ‘ನೇತಾಜಿ ಹೋರಾಟ ನಮಗೆ ಆದರ್ಶ’, ‘ಅವರ ಜನ್ಮದಿನವನ್ನು ರಾಷ್ಟ್ರೀಯ ಹಬ್ಬವಾಗಿ ಸರ್ಕಾರ ಘೋಷಿಸಬೇಕು’ ಎಂದು ಘೋಷಣೆ ಕೂಗುತ್ತಾ ಸಾಗಿದರು.
ಕಾಳಿಕಾಮಠೇಶ್ವರಿ ದೇಗುಲ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘಟನೆ ಮುಖ್ಯಸ್ಥ ರವಿಕುಮಾರ್, ‘ನೇತಾಜಿ ನಮಗೆಲ್ಲರಿಗೂ ಸ್ಪೂರ್ತಿ. ಇಂತಹ ಮಹಾನ್ ವ್ಯಕ್ತಿಯ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು. ಅವರ ಹೋರಾಟದ ಹಾದಿಯನ್ನು ಮುಂದುವರೆಸಬೇಕು. ಅವರ ಕನಸುಗಳನ್ನು ಸಾಕಾರ ಮಾಡುವ ಪ್ರಯತ್ನ ಪ್ರಾಮಾಣಿಕವಾಗಿ ಮಾಡಬೇಕು’ ಎಂದರು.
‘ಧಾರ್ಮಿಕ ಕಂದಾಚಾರವಿಲ್ಲದ, ಕೋಮು ಗಲಭೆಗಳಿಲ್ಲದ, ಬಡವ-ಶ್ರೀಮಂತನೆಂಬ ಬೇಧವಿಲ್ಲದ, ಎಲ್ಲರಿಗೂ ಶಿಕ್ಷಣ, ಉದ್ಯೋಗ, ಆರೋಗ್ಯ, ವಸತಿಯ ಜತೆಗೆ ಗೌರವ ಸಿಗುವಂಥ ಸುಭಿಕ್ಷಿತ ಸಮಾಜವಾದಿ ರಾಷ್ಟ್ರ ನಿರ್ಮಾಣದ ಕನಸು ಹೊತ್ತು ಶ್ರಮಿಸಿ ಹುತಾತ್ಮರಾದವರು ನೇತಾಜಿ. ಅದು ನನಸಾಗುವವರೆಗೂ ನಮ್ಮ ಪ್ರಯತ್ನ ಮುಂದುವರೆದಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ’ ಎಂದು ಮನವಿ ಮಾಡಿದರು.
ನಿಂಗರಾಜು, ಸಂಜಯ್, ವಿಜಯ್, ಮಾರುತಿ, ಸುಜಾತಾ, ತ್ರಿವೇಣಿ, ಕುಮುದಾ, ನಾಗರಾಜ್, ಎನ್. ರಾಜು, ನಾಗರಾಜು, ಸುರೇಶಾಚಾರ್ ಅವರೂ ಇದ್ದರು.
ನಗರದ ಪಿಳ್ಳೆಕೇರನಹಳ್ಳಿ, ಅಂಬೇಡ್ಕರ್ ಬೀದಿ, ಕಾಮನಬಾವಿ ಬಡಾವಣೆ ಹಾಗೂ ಜೋಗಿಮಟ್ಟಿ ವೃತ್ತ ಸೇರಿ ವಿವಿಧೆಡೆ ನೇತಾಜಿ ಜನ್ಮ ದಿನ ಆಚರಿಸಿ, ಗೌರವ ಸಲ್ಲಿಸಲಾಯಿತು.