ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್. ನಿಜಲಿಂಗಪ್ಪ ಅವರ ಇಲ್ಲಿನ ಮನೆಯನ್ನು ಸ್ಮಾರಕ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ನೋಂದಣಿ ಮಾಡಿಕೊಡುವುದಕ್ಕೆ ತಾಂತ್ರಿಕ ತೊಡಕು ಎದುರಾಗಿದೆ.ನೋಂದಣಿಗಾಗಿಯೇ ಅಮೆರಿಕದಿಂದ ಬಂದಿದ್ದ ಅವರ ಮೊಮ್ಮಗ ಬುಧವಾರ ನಿರಾಸೆಯಿಂದ ಹಿಂದಿರುಗಿದ್ದಾರೆ.
ಸ್ಮಾರಕವಾಗಿ ಪರಿವರ್ತಿಸುವ ಉದ್ದೇಶದಿಂದ ಮನೆಯ ನೋಂದಣಿ ಪ್ರಕ್ರಿಯೆಗೆ ಜಿಲ್ಲಾಡಳಿತ ಬುಧವಾರ ಸಿದ್ಧತೆ ಮಾಡಿಕೊಂಡಿತ್ತು. ನಿಜಲಿಂಗಪ್ಪನವರ ಪುತ್ರ ಎಸ್.ಎನ್. ಕಿರಣ್ಶಂಕರ್ ಹಾಗೂ ಮೊಮ್ಮಗ ಅಮೆರಿಕದಲ್ಲಿರುವ ಎಸ್.ಕೆ. ವಿನಯ್ ಕೂಡ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದರು.
ನಿಜಲಿಂಗಪ್ಪ ಅವರ ನಿವಾಸವು ಪುತ್ರ ಕಿರಣ್ಕುಮಾರ್ ಅವರ ಹೆಸರಲ್ಲಿದೆ. ನಿಜಲಿಂಗಪ್ಪ ಅವರೇ ಬರೆದಿಟ್ಟ ವಿಲ್ನಲ್ಲಿ ಕಿರಣ್ಕುಮಾರ್ ಅವರ ಪುತ್ರ ವಿನಯ್ ಅವರಿಗೆ ಮನೆ ಸೇರಬೇಕೆಂದು ಉಲ್ಲೇಖಿಸಲಾಗಿದೆ. ವಿಲ್ನಲ್ಲಿ ತಾಂತ್ರಿಕ ಸಮಸ್ಯೆಗಳಿವೆ ಎಂಬುದಾಗಿ ಉಪನೋಂದಣಾಧಿಕಾರಿ ನೋಂದಣಿಗೆ ಹಿಂದೇಟು ಹಾಕಿದ್ದಾರೆ. ಇದರಿಂದ ಇಡೀ ಪ್ರಕ್ರಿಯೆ ನನೆಗುದಿಗೆ ಬಿದ್ದಂತಾಗಿದೆ.
ಈ ನಿವಾಸವನ್ನು ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸುವುದಾಗಿ ಸರ್ಕಾರ 2020–21ರ ಬಜೆಟ್ನಲ್ಲಿ ಘೋಷಿಸಿತ್ತು. ವಾರಸುದಾರರಿಂದ ಮನೆ ಖರೀದಿಸಿ ಅಭಿವೃದ್ಧಿಪಡಿಸಲು₹ 5 ಕೋಟಿ ಅನುದಾನವನ್ನು ಮೀಸಲಿಟ್ಟಿತ್ತು. ವಿ.ಪಿ. ಬಡಾವಣೆಯಲ್ಲಿರುವ ಮನೆಗೆ ಲೋಕೋಪಯೋಗಿ ಇಲಾಖೆ ₹ 4.18 ಕೋಟಿ ಮೌಲ್ಯನಿಗದಿಪಡಿಸಿತ್ತು.