ಚಿತ್ರದುರ್ಗ: ಶರಣರು, ಸಂತರು, ದಾರ್ಶನಿಕರು ಅಂತರಂಗದ ಸಾಧಕರು. ಪ್ರತಿಯೊಬ್ಬರು ಅಂತರಂಗವನ್ನು ಸಾಗುವಳಿ ಮಾಡಬೇಕು ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಮುರುಘಾ ಮಠದಲ್ಲಿ ಶರಣಸಂಸ್ಕೃತಿ ಉತ್ಸವಕ್ಕೂ ಮುನ್ನ ನಡೆಯುವ ವಿಶೇಷ ಪ್ರವಚನ ಮಾಲೆಯಲ್ಲಿ ಅವರು ಮಾತನಾಡಿದರು.
‘ತನುವ ತೋಟವ ಮಾಡಿ ಎಂದು ಅಲ್ಲಮರು ಹೇಳಿದ್ದಾರೆ. ಬಹಿರಂಗ ನೋಟದ ಜೊತೆಗೆ ಅಂತರಂಗದ ನೋಟ ಬೇಕು. ಕೃಷಿ ಇಲ್ಲದಿದ್ದರೆ ಮಾನವನಿಗೆ ಅನ್ನ ಸಿಗುವುದಿಲ್ಲ. ಆಹಾರದ ಮೂಲ ಕೃಷಿ. ರೈತರು ಕೃಷಿ ಜೀವನದ ಸಾಧಕರು’ ಎಂದು ಬಣ್ಣಿಸಿದರು.
ಸಂಗಮೇಶ್ವರ ದೇವರು ಮಾತನಾಡಿ, ‘ಸಂಸ್ಕಾರದ ಮುಂದುವರಿದ ರೂಪವೇ ಸಂಸ್ಕೃತಿ. ಜೀವನ ಸಾಧುವನ್ನಾಗಿ ಮಾಡಿಕೊಳ್ಳುವುದೇ ಸಂಸ್ಕಾರ. ಸಮಾಜಕ್ಕೆ ಹಿತವನ್ನು ಕಾಣುವುದನ್ನು ಕಂಡುಕೊಂಡ ಶರಣರು ಸೂರ್ಯ-ಚಂದ್ರರ ಬೆಳಕಿನಂತೆ ಅಂತರಂಗದೊಳಗೆ ಸತ್ಸಂಗ ಎಂಬ ವಚನಗಳನ್ನು ತುಂಬಿದರು’ ಎಂದರು.
ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ಎಲ್ಲ ವಟುಗಳಿಗೆ ಮುರುಘಾ ಮಠ ಆಕರ್ಷಕ ಕೇಂದ್ರ. ಶರಣ ಸಂಸ್ಕೃತಿ ಉತ್ಸವ ಜೀವನೋತ್ಸಾಹ ತುಂಬುತ್ತದೆ. ಎಲ್ಲ ಸಂಸ್ಕೃತಿಗೆ ಮೂಲ ಕೃಷಿ ಎಂದು ಹೇಳಿದರು.
ವೀರಶೈವ ಸಮಾಜದ ಅಧ್ಯಕ್ಷ ಟಿ.ಎಸ್.ಎನ್.ಜಯಣ್ಣ, ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಫಾದರ್ ಎಂ.ಎಸ್.ರಾಜು ಇದ್ದರು.