ಚಿತ್ರದುರ್ಗ: ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ ಆಗುತ್ತಿರುವುದನ್ನು ತಡೆಯಬೇಕು ಎಂದುಚಿತ್ರದುರ್ಗ ನಾಯಕ ಸಮಾಜದ ಪದಾಧಿಕಾರಿಗಳು ಸೋಮವಾರ ಇಲ್ಲಿ ಪ್ರತಿಭಟಿಸಿದರು.
ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಸಮುದಾಯದ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಒತ್ತಾಯಿಸಿ ಉಪವಿಭಾಗಾಧಿಕಾರಿ ವಿಜಯಕುಮಾರ್ ಮೂಲಕ ಮನವಿ ಸಲ್ಲಿಸಿದರು.
ಪರಿಶಿಷ್ಟ ಪಂಗಡದ ಜನಾಂಗಕ್ಕೆ ಈಗಾಗಲೇ ರಾಜಕೀಯವಾಗಿ ಶೇ 7ರಷ್ಟು ಮೀಸಲಾತಿ ನೀಡಲಾಗಿದೆ. ಶೈಕ್ಷಣಿಕ ಮತ್ತು ಉದ್ಯೋಗದ ನೇಮಕಾತಿಯಲ್ಲಿ ಈಗಿರುವ ಶೇ 3ರ ಮೀಸಲಾತಿಯನ್ನು ಶೇ 7.5 ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಮುಂಬಡ್ತಿ ಮೀಸಲಾತಿ ಶೀಘ್ರವೇ ಜಾರಿಗೆ ತರಬೇಕು. ಪರಿಶಿಷ್ಟ ಪಂಗಡ ಜನಾಂಗದ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಾಯಕ ಸಮುದಾಯದ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು.ನಿಗಮ ಮಂಡಳಿಗಳ ನೇಮಕದಲ್ಲಿ ಸಮುದಾಯದವರಿಗೆ ಆದ್ಯತೆ ನೀಡಬೇಕು ಎಂದು ಸರ್ಕಾರವನ್ನು ಕೋರಿದರು.
ನಾಯಕ ಸಮುದಾಯದ ಮುಖಂಡರಾದ ಎಚ್.ಜೆ.ಕೃಷ್ಣಮೂರ್ತಿ,ದೀಪಕ್,ಡಿ. ಗೋಪಾಲಸ್ವಾಮಿ ನಾಯಕ, ಗುರುಸಿದ್ದಪ್ಪ, ಲಿಂಗವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ರಾಜಾ ಮದಕರಿನಾಯಕ, ಸರ್ವೆ ಬೋರಣ್ಣ, ಗೋಪಿನಾಥ್, ಸೋಮೇಂದ್ರ, ಪ್ರಕಾಶ್, ಅಶೋಕ್ ಬೆಳಗಟ್ಟ, ಸುರೇಶ್, ಸಿ.ಟಿ. ರಾಜೇಶ್, ತಿಪ್ಪೇಸ್ವಾಮಿ ಇದ್ದರು.