ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ರೈಲ್ವೆ ಕೆಳಸೇತುವೆ ಜಂಟಿ ಸಮೀಕ್ಷೆ

ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ತಾಕೀತು
Last Updated 9 ಅಕ್ಟೋಬರ್ 2021, 6:11 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ರೈಲ್ವೆ ಹಳಿಗಳಿಗೆ ನಿರ್ಮಿಸಿದ ಕೆಳಸೇತುವೆಗಳ ಜಂಟಿ ಸಮೀಕ್ಷೆ ನಡೆಸಿ ಸಮಸ್ಯೆಗೆ ವಾರದೊಳಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಸೂಚನೆ ನೀಡಿದರು.

ಮೆದೇಹಳ್ಳಿ ಹಾಗೂ ತುರುವನೂರು ರಸ್ತೆಯಲ್ಲಿ ರೈಲ್ವೆ ಹಳಿಗೆ ನಿರ್ಮಿಸಿದ ಕೆಳಸೇತುವೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈಲ್ವೆ, ನಗರ ಸ್ಥಳೀಯ ಸಂಸ್ಥೆ, ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಎಲ್ಲ ಕೆಳಸೇತುವೆ ಭೇಟಿ ಮಾಡುವಂತೆ ತಾಕೀತು ಮಾಡಿದರು.

ಮಳೆ ಸುರಿದಾಗ ಕೆಳಸೇತುವೆಯಲ್ಲಿ ನೀರು ಸಂಗ್ರಹವಾಗಿ ಜನ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಸಚಿವರಿಗೆ ದೂರುಗಳು ಹೋಗಿದ್ದರಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಗರ ಸಮೀಪದ ಕೆಳಸೇತುವೆಗಳಿಗೆ ಅಧಿಕಾರಿಗಳನ್ನು ಕರೆದೊಯ್ದು ಪರಿಶೀಲಿಸಿ ತರಾಟೆ ತೆಗೆದುಕೊಂಡರು.

‘ಮಳೆ ಸುರಿದಾಗ ರೈಲ್ವೆ ಕೆಳಸೇತುವೆ ಮೂಲಕ ಸಂಚರಿಸಲು ಸಾಧ್ಯವಿಲ್ಲ. ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಎಲ್ಲಿಯೂ ಇಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಐದಾರು ಅಡಿ ನೀರಿನಲ್ಲಿ ಸಂಚರಿಸಲು ಸಾಧ್ಯವಿಲ್ಲ. ಅನೇಕರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗಮನ ಹರಿಸಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

ಸೇತುವೆ ಯಾವ ಇಲಾಖೆಯ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಅರಿತು ಅಧಿಕಾರಿಗಳನ್ನು ಪ್ರಶ್ನಿಸಿದರು. ರೈಲ್ವೆ ಇಲಾಖೆಗೆ ಪತ್ರ ಬರೆದು ಪರಿಹಾರಕ್ಕೆ ಏಕೆ ಪ್ರಯತ್ನಿಸಿಲ್ಲ ಎಂದು ಪ್ರಶ್ನಿಸಿದರು. ಕೆಳಸೇತುವೆಗಳ ವಿನ್ಯಾಸ ಬದಲಿಸುವಂತೆ ಸೂಚಿಸಿದರು. ಜಂಟಿ ಸಮೀಕ್ಷೆಯ ವರದಿ ಸಲ್ಲಿಕೆಗೆ ವಾರದ ಗಡುವುದು ನೀಡಿದರು.

ಚಿತ್ರದುರ್ಗ ನಗರದ ಮೆದೇಹಳ್ಳಿ ರಸ್ತೆ, ತುರುವನೂರು ರಸ್ತೆ, ಕಾಟೀಹಳ್ಳಿ, ಪಣಜನಹಳ್ಳಿ, ಹನುಮನಕಟ್ಟೆ, ಪಾಡಿಗಟ್ಟೆ, ಸೇರಿ ಜಿಲ್ಲೆಯಲ್ಲಿ ಹಲವು ರೈಲ್ವೆ ಕೆಳಸೇತುವೆಗಳಿವೆ. ಮಳೆ ನೀರು ಸರಾಗವಾಗಿ ಹರಿದು ಹೋಗುವ ರೀತಿಯಲ್ಲಿ ವಿನ್ಯಾಸ ರೂಪಿಸಬೇಕಿದೆ. ಅಧಿಕಾರಿಗಳು ಅಧ್ಯಯನ ಮಾಡಿ ಸಮಸ್ಯೆ ಪತ್ತೆ ಮಾಡಬೇಕು. ತಾಂತ್ರಿಕ ನೆರವು ಪಡೆದು ಕಾಲಮಿತಿಯಲ್ಲಿ ಸಮಸ್ಯೆ ಪರಿಹರಿಸಬೇಕು ಎಂದರು.

ನೈರುತ್ಯ ರೈಲ್ವೆಯ ಚಿತ್ರದುರ್ಗ ವಿಭಾಗೀಯ ಸಹಾಯಕ ಎಂಜಿನಿಯರ್‌ ಶುಭಂ ಶರ್ಮ
ಇದ್ದರು.

ಅಧಿಕಾರಿ ವಿರುದ್ಧ ಕಿಡಿ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಧ್ಯಾಹ್ನ ನಿಗದಿಯಾಗಿದ್ದ ಸಭೆಗೆ ಆಗಮಿಸಿದ ಸಚಿವರು ಅಧಿಕಾರಿಗಳಿಗೆ ಕಾದು ಕುಳಿತರು. ತಡವಾಗಿ ಬಂದ ಅಧಿಕಾರಿಗಳ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದರು.

ಸಚಿವರೊಂದಿಗೆ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಇದ್ದರು. ಆದರೆ, ಉಳಿದ ಇಲಾಖೆಯ ಅಧಿಕಾರಿಗಳು ಹಾಜರಾಗಿರಲಿಲ್ಲ.

ಗ್ರಾಮೀಣಾಭಿವೃದ್ಧಿ ಇಲಾಖೆ ಎಂಜಿನಿಯರ್‌ ಭಾರತಿ ಅವರು ಸಚಿವರ ಪ್ರಶ್ನೆಗೆ ಅಸಮಂಜಸ ಉತ್ತರ ನೀಡಿದರು. ಇದರಿಂದ ಬೇಸರಗೊಂಡ ಸಚಿವರು, ‘ಯಾವ ವಿಷಯಕ್ಕೆ ಸಂಬಂಧಿಸಿ ಸಭೆ ನಡೆಸಲಾಗುತ್ತಿದೆ ಎಂಬ ಮಾಹಿತಿ ನಿಮ್ಮ ಬಳಿ ಇದ್ದಂತೆ ಕಾಣುತ್ತಿಲ್ಲ. ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಬೇರೆಡೆಗೆ ಹೋಗಿ’ ಎಂದರು.

ಸಂಖ್ಯೆ–ಸ್ಥಳ ಗೊಂದಲ

ರೈಲ್ವೆ ಕೆಳಸೇತುವೆಗೆ ಸಂಬಂಧಿಸಿ ನಡೆದ ಸಭೆಯಲ್ಲಿ ಸಂಖ್ಯೆ ಮತ್ತು ಸ್ಥಳದ ಗೊಂದಲ ನಿರ್ಮಾಣವಾಗಿತ್ತು. ರೈಲ್ವೆ ಅಧಿಕಾರಿಗಳ ಮಾತು ಸಚಿವರಿಗೆ ಹಾಗೂ ಸಚಿವರು ಚರ್ಚಿಸಿದ ವಿಷಯ ರೈಲ್ವೆ ಅಧಿಕಾರಿಗಳಿಗೆ ಅರ್ಥವಾಗಲಿಲ್ಲ.

ರೈಲ್ವೆ ಇಲಾಖೆ ಪ್ರತಿ ಕೆಳಸೇತುವೆಗೆ ಸಂಖ್ಯೆಯನ್ನು ನೀಡಿದೆ. ಸ್ಥಳೀಯರಲ್ಲದ ಅಧಿಕಾರಿಗಳಿಗೆ ಸಂಖ್ಯೆ ಹೆಸರಿಸಿದರೆ ಮಾತ್ರ ಗೊತ್ತಾಗುತ್ತದೆ. ಆದರೆ, ಈ ಸಂಖ್ಯೆಗಳು ಸ್ಥಳೀಯ ಅಧಿಕಾರಿಗಳಿಗೆ ಗೊತ್ತಿಲ್ಲ. ಸ್ಥಳ ಹೆಸರಿಸಿ ಸಮಸ್ಯೆ ಬಿಚ್ಚಿಟ್ಟಿದ್ದು ರೈಲ್ವೆ ಅಧಿಕಾರಿಗಳಿಗೆ ಅರ್ಥವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT