ಚಿತ್ರದುರ್ಗ: ನಗರದ ಕೋಟೆನಾಡು ಬೌದ್ಧ ವಿಹಾರ ಧ್ಯಾನ ಕೇಂದ್ರದಲ್ಲಿ ಭಾನುವಾರ ನಾಲ್ವಡಿ ಕೃಷ್ಣರಾಜ ಒಡೆಯರ್ಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.
ಗೌರವ ಸಮರ್ಪಿಸಿ ಮಾತನಾಡಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ‘89ವರ್ಷಗಳ ನಂತರ ಚಿತ್ರದುರ್ಗದ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾಗಿರುವುದು ಸಂತಸದ ಸಂಗತಿ. ಅಣೆಕಟ್ಟು ನಿರ್ಮಾಣಕ್ಕೆ ಕಾರಣರಾದ ಮೈಸೂರಿನ ಅರಸರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದರು.
‘ಉನ್ನತ ಶಿಕ್ಷಣ ಪಡೆದ ಬುದ್ದಿಜೀವಿಗಳು ಬುದ್ಧವಿಹಾರ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ. ಶಾಸಕರ ಅನುದಾದಡಿ ಕೋಟೆನಾಡು ಬೌದ್ಧ ವಿಹಾರ ಧ್ಯಾನ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ₹ 10 ಲಕ್ಷ ನೀಡುವುದಾಗಿ’ ಭರವಸೆ ಅವರು ನೀಡಿದರು.
ಗೌತಮ ಬುದ್ಧ ಪ್ರತಿಷ್ಠಾನ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ, ‘ಜಾತಿ ವ್ಯವಸ್ಥೆಯು ಪ್ರಬುದ್ಧ ಭಾರತ ನಿರ್ಮಾಣಕ್ಕೆ ಅತಿದೊಡ್ಡ ತೊಡಕಾಗಿದೆ. ಜಾತಿಗಳು ಗಟ್ಟಿಯಾದಂತೆ ಜಾತಿ ಪ್ರತಿಷ್ಠೆಗಳು ಹೆಚ್ಚಾಗಿ ಸಮಾಜದಲ್ಲಿ ಸಂಘರ್ಷ ಹೆಚ್ಚಿ ದೇಶದ ಪ್ರಗತಿ ಕುಂಠಿತವಾಗುತ್ತದೆ. ಎಲ್ಲಾ ಜಾತಿ ಸಂಘಟನೆಗಳು ಅಂತಿಮವಾಗಿ ಬುದ್ಧ ಮಾರ್ಗ ಸೇರುವುದರಿಂದ ಮಾತ್ರ ಪ್ರಬುದ್ಧ ಭಾರತ ನಿರ್ಮಿಸಲು ಸಾಧ್ಯ’ ಎಂದು ತಿಳಿಸಿದರು.
ಜಿಲ್ಲಾ ಮಾದಿಗ ನೌಕರರ ಸಂಘ ಅಧ್ಯಕ್ಷ ಚಂದ್ರಪ್ಪ, ಉಪನ್ಯಾಸಕ ಬಿ.ಎಂ.ಗುರುನಾಥ, ಬೆನಕನಹಳ್ಳಿ ಚಂದ್ರಪ್ಪ, ಈ.ನಾಗೇಂದ್ರಪ್ಪ, ಹಿರಿಯೂರು ನಗರಸಭೆ ಪೌರಾಯುಕ್ತ ಡಿ. ಉಮೇಶ್, ಸದಸ್ಯ ಸಣ್ಣಪ್ಪ, ರಾಷ್ಟ್ರೀಯ ಪ್ರಬುದ್ಧ ಸೇನೆ ಅವಿನಾಶ್, ಬಾಲೇನಹಳ್ಳಿ ರಾಮಣ್ಣ ಅವರೂ ಈ ಸಂದರ್ಭದಲ್ಲಿ ಇದ್ದರು.