ಚಿತ್ರದುರ್ಗ: ಕೇಂದ್ರ ಸರ್ಕಾರ ನೂತನವಾಗಿ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದಕ್ಕೆ ಇಲ್ಲಿ ಶನಿವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಇತರ ಸಂಘಟನೆಗಳು ಹಣ್ಣು, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜೆ. ಯಾದವರೆಡ್ಡಿ, ‘ಪ್ರಧಾನಿ ಮೋದಿ ಅವರು ಮುಂಚೆಯೇ ರೈತರ ಸಮಸ್ಯೆ ಆಲಿಸಿ ಉತ್ತಮ ನಿರ್ಧಾರ ಕೈಗೊಂಡಿದಿದ್ದರೆ 700ಕ್ಕೂ ಹೆಚ್ಚು ರೈತರ ಪ್ರಾಣ ಉಳಿಯುತ್ತಿತ್ತು’ ಎಂದರು.
‘ಜನಾಭಿಪ್ರಾಯದ ವಿರುದ್ಧ ಯಾವ ಸರ್ಕಾರವಾದರೂ ಈಜಲು ಸಾಧ್ಯವಿಲ್ಲ ಎಂಬುದನ್ನು ಈಗಲಾದರೂ ಆಳುವ ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು. ಜನವಿರೋಧಿ ಧೋರಣೆ ಅನುಸರಿಸಿದರೆ, ಶಾಂತಿಯುತ ಹೋರಾಟ ಅನಿವಾರ್ಯ’ ಎಂದು ಎಚ್ಚರಿಸಿದರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ಸುರೇಶ್ಬಾಬು, ‘ದೆಹಲಿಯಲ್ಲಿ ರೈತರು ವರ್ಷಗಟ್ಟಲೆ ನಡೆಸಿದ ಹೋರಾಟ ಸ್ವಾತಂತ್ರ್ಯ ಹೋರಾಟವನ್ನೇ ನೆನಪಿಸುವಂತ್ತಿತ್ತು. ರಾಜ್ಯ ಸರ್ಕಾರ ವಿದ್ಯುತ್ ದರ ಹೆಚ್ಚಿಸಲು ಮುಂದಾಗಿರುವುದನ್ನು ಕೂಡಲೇ ಕೈಬಿಡಬೇಕು’ ಎಂದು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ನುಲೇನೂರು ಎಂ. ಶಂಕರಪ್ಪ, ‘ಸತತ ಹೋರಾಟದಿಂದ ಮಾತ್ರ ನ್ಯಾಯ ಪಡೆಯಲು ಸಾಧ್ಯ ಎಂಬುದಕ್ಕೆ ದೆಹಲಿ ಹೋರಾಟ ಸಾಕ್ಷಿಯಾಗಿದೆ. ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು’ ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಮುಖಂಡರಾದ ಕೆ.ಪಿ. ಭೂತಯ್ಯ, ಬಸ್ತಿಹಳ್ಳಿ ಸುರೇಶ್ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹಂಪಯ್ಯನಮಾಳಿಗೆ ಧನಂಜಯ, ಕೋಗುಂಡೆ ರವಿ, ಪ್ರಭು, ಮಲ್ಲಾಪುರದ ತಿಪ್ಪೇಸ್ವಾಮಿ, ಹಮಾಲರ ಸಂಘದ ಬಸವರಾಜಪ್ಪ, ಎಸ್ಯುಸಿಐನ ರವಿಕುಮಾರ್, ಲಿಂಗರಾಜ್, ಮೇಘನಾ, ತ್ರಿವೇಣಿ, ಟಿ. ಶಫಿವುಲ್ಲಾ, ವೈ. ಕುಮಾರ್ ಇದ್ದರು.