ಬಿ.ದುರ್ಗ, ಕಸಬಾ ಹೋಬಳಿಗಳಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿ ಒಂದು ತಿಂಗಳಾಗಿದೆ. ರಾಮಗಿರಿಯ ಕೆಲವು ಭಾಗದಲ್ಲಿ ಮೆಕ್ಕೆಜೋಳ ಬಿತ್ತನೆ ಆಗಿದ್ದು, ತಾಳ್ಯ ಹೋಬಳಿಯಲ್ಲಿ ಈಗ ಬಿತ್ತನೆ ಆರಂಭವಾಗಿದೆ. ನಿರಂತರ ಸೋನೆ ಮಳೆಯಿಂದ ಈಗಾಗಲೇ ಬಿತ್ತನೆ ಆಗಿ 20ರಿಂದ 30 ದಿನಗಳ ಮೆಕ್ಕೆಜೋಳದ ಬೆಳೆಯ ಮಧ್ಯೆ ಹುಲ್ಲು, ಕಳೆ ಬೆಳೆದಿದ್ದು, ತೆಗೆಯಲು ಸಾಧ್ಯವಾಗುತ್ತಿಲ್ಲ. ಹೊಲದಲ್ಲಿ ತೇವಾಂಶ ಹೆಚ್ಚಿರುವುದರಿಂದ ಎಡೆಕುಂಟೆ ಹೊಡೆಯಲೂ ಆಗುತ್ತಿಲ್ಲ. ಮಳೆ ಹೀಗೆಯೇ ಮುಂದುವರಿದರೆ ಜೋಳದ ಬೆಳೆ ಬಿಳಿ ಬಣ್ಣಕ್ಕೆ ತಿರುಗುವ ಆತಂಕ ಇದೆ ಎನ್ನುತ್ತಾರೆ ರೈತರು.