ಹೊಸದುರ್ಗ: ಇಲ್ಲಿನ ಹೊಸ ಕೋರ್ಟ್ ಮುಂಭಾಗದ ತರೀಕೆರೆ ಮುಖ್ಯರಸ್ತೆಯಲ್ಲಿ ಬೈಕ್ಗೆ ಸಿಲಿಂಡರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸಹೋದರ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ತಾಲ್ಲೂಕಿನ ಸಾಣೇಹಳ್ಳಿ ಗ್ರಾಮದ ನಂದಿನಿ (19) ಮೃತಪಟ್ಟ ವಿದ್ಯಾರ್ಥಿ. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಎ ಪದವಿ ಓದುತ್ತಿದ್ದಳು. ಬೈಕ್ ಓಡಿಸುತ್ತಿದ್ದ ಸಹೋದರ ಯತೀಶ್ (20) ಗಾಯಗೊಂಡಿದ್ದಾನೆ. ಮೃತ ಸಹೋದರಿ ಓದುತ್ತಿದ್ದ ಕಾಲೇಜಿನಲ್ಲಿಯೇ ಯತೀಶ್ ದ್ವಿತೀಯ ವರ್ಷದಲ್ಲಿ ಬಿಎ ಪದವಿ ಓದುತ್ತಿದ್ದಾನೆ.
ಸ್ವಗ್ರಾಮ ಸಾಣೇಹಳ್ಳಿಯಿಂದ ಬೆಳಿಗ್ಗೆ ಕಾಲೇಜಿಗೆ ಬರುವಾಗ ಈ ಅವಘಡ ಸಂಭವಿಸಿದೆ.
ಪಟ್ಟಣದ ಹೊಸ ಕೋರ್ಟ್ ಮುಂಭಾಗದ ತರೀಕೆರೆ ಮುಖ್ಯರಸ್ತೆಯಲ್ಲಿ ಅವೈಜ್ಞಾನಿಕವಾಗಿ ಹಾಕಿರುವ ರಸ್ತೆ ಉಬ್ಬು ವಿದ್ಯಾರ್ಥಿನಿಯನ್ನು ಬಲಿ ತೆಗೆದುಕೊಂಡಿದೆ.