ಚಳ್ಳಕೆರೆ: ಇಲ್ಲಿನ ಕೃಷಿ ಇಲಾಖೆ ಆವರಣದಲ್ಲಿ ಬುಧವಾರ ಅರ್ಜಿ ಹಿಡಿದ ನೂರಾರು ಬೆಳೆಗಾರರು ಬಿತ್ತನೆ ಕಡಲೆ ಬೀಜ ಪಡೆಯಲು ಮುಗಿಬಿದ್ದರು. ಆಗ ನೂಕು ನುಗ್ಗಲು ಉಂಟಾಯಿತು.
ಕೃಷಿ ಅಧಿಕಾರಿಗಳು ಕೂಡಲೇ ಪೊಲೀಸ್ ಸಿಬ್ಬಂದಿ ಸಹಕಾರದಿಂದ ಬ್ಯಾರಿಕೇಡ್ ನಿರ್ಮಿಸುವ ಮೂಲಕ ರೈತರನ್ನು ನಿಯಂತ್ರಿಸಿದರು. ನಂತರ ಬಿತ್ತನೆ ಬೀಜ ವಿತರಿಸಿದರು.
ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಪ್ರಭಾಕರ್, ‘ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಕೃಷಿ ಚಟುವಟಿಕೆ ಆರಂಭವಾಗಿದೆ. ಬಿತ್ತನೆಗೆ ಅಗತ್ಯವಾದ ಹತ್ತಿ, ಕಡಲೆ ಮುಂತಾದ ಬಿತ್ತನೆ ಬೀಜವನ್ನು ರೈತರಿಗೆ ಸಮರ್ಪಕವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.
‘ಮೊಳಕಾಲ್ಮುರು, ಹಿರಿಯೂರು ಮತ್ತು ಚಳ್ಳಕೆರೆ ತಾಲ್ಲೂಕಿಗೆ 13 ಸಾವಿರ ಕ್ವಿಂಟಲ್ ಕಡಲೆ ಬಿತ್ತನೆ ಬೀಜ ಸರಬರಾಜು ಮಾಡಲು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಈಗಾಗಲೇ 5 ಸಾವಿರ ಕ್ವಿಂಟಲ್ ಬೀಜ ಪೂರೈಕೆ ಮಾಡಿದೆ. ಇನ್ನು 8 ಸಾವಿರ ಕ್ವಿಂಟಲ್ ಬೀಜ ವಾರದೊಳಗೆ ತರಿಸಿ ಜಿಲ್ಲೆಯ ಎಲ್ಲ ರೈತರಿಗೆ ವಿತರಿಸಲಾಗುವುದು’ ಎಂದು ಭರವಸೆ ನೀಡಿದರು.
ಕೃಷಿ ಸಹಾಯಕ ನಿದೇಶಕ ಡಾ.ಮೋಹನ್ಕುಮಾರ್, ‘ಈಗಾಗಲೇ 600 ಕ್ವಿಂಟಲ್ ಬಿತ್ತನೆ ಕಡಲೆ ಬೀಜ ವನ್ನು ಇಲಾಖೆಯಲ್ಲಿ ದಾಸ್ತಾನು ಮಾಡ ಲಾಗಿದೆ. ರೈತ ಸಂಪರ್ಕ ಕೇಂದ್ರದಲ್ಲಿ ಎರಡು ದಿನಗಳಿಂದ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಆದ್ದರಿಂದ ಬೇರೆಯವರ ಪರವಾಗಿ ಬೀಜವನ್ನು ಪಡೆಯುವ ಬದಲಿಗೆ ಅರ್ಹ ರೈತರೇ ಖುದ್ದಾಗಿ ಅಗತ್ಯ ದಾಖಲೆ ನೀಡುವ ಮೂಲಕ ಬಿತ್ತನೆ ಬೀಜ ಪಡೆಯಬೇಕು’ ಎಂದು ಮನವಿ ಮಾಡಿದರು.