ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಅ.13ರಿಂದ ಶರಣ ಸಂಸ್ಕೃತಿ ಉತ್ಸವ

ಮರುಘಾ ಮಠದಲ್ಲಿ ನಡೆಯಲಿವೆ ಕ್ರೀಡೆ, ಚರ್ಚೆ, ಗೋಷ್ಠಿ
Last Updated 2 ಅಕ್ಟೋಬರ್ 2018, 12:35 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಧ್ಯ ಕರ್ನಾಟಕದ ಹಬ್ಬದಂತೆ ಬಿಂಬಿತವಾಗುತ್ತಿರುವ ಶರಣ ಸಂಸ್ಕೃತಿ ಉತ್ಸವ ಅ.13ರಿಂದ 22ರವರೆಗೆ ಮುರುಘಾ ಮಠದ ಆವರಣದಲ್ಲಿ ನಡೆಯಲಿದೆ. ಉತ್ಸವದ ಸಿದ್ಧತೆಗಳು ಮಠದಲ್ಲಿ ಭರದಿಂದ ನಡೆಯುತ್ತಿವೆ.

‘ಶರಣ ಸಂಸ್ಕೃತಿ ಸಾಂಪ್ರದಾಯಿಕ ಆಚರಣೆಯಲ್ಲ. ವೈಚಾರಿಕತೆ ಬಿತ್ತುವ, ಸಮಾನತೆ ಸಾರುವ ಹಾಗೂ ಸರ್ವರು ಪಾಲ್ಗೊಳ್ಳುವ ಹಬ್ಬ. ಬಸವಾದಿ ಶರಣರ ಅನುಭವ ಮಂಟಪದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಉಪನ್ಯಾಸ, ಸಂವಾದ, ವಿಚಾರ ಸಂಕಿರಣ ಆಯೋಜಿಸಲಾಗಿದೆ. ಪರಸ್ಪರ ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ಶಿವಮೂರ್ತಿ ಮುರುಘಾ ಶರಣರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೂರು ದಿನ ಕ್ರೀಡಾಕೂಟ

‘ಅ.13ರಂದು ಬೆಳಿಗ್ಗೆ 8ಕ್ಕೆ ಮಠಾಧೀಶರ ನೇತೃತ್ವದಲ್ಲಿ ‘ಸೌಹಾರ್ದ ನಡಿಗೆ ಶರಣ ಸಂಸ್ಕೃತಿ ಕಡೆಗೆ’ ಎಂಬ ಜಾಥಾಗೆ ಚಲನಚಿತ್ರ ನಿರ್ಮಾಪ ರಾಕ್‍ಲೈನ್ ವೆಂಕಟೇಶ್ ಚಾಲನೆ ನೀಡಲಿದ್ದಾರೆ. ಅಂದು ಸಂಜೆ ‘ಜಮುರಾ ಕಪ್‌’ ಹೊನಲು ಬೆಳಕಿನ ರಾಜ್ಯಮಟ್ಟದ ಪುರುಷರ ವಾಲಿಬಾಲ್‌ ಪಂದ್ಯಕ್ಕೆ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ರುದ್ರಮುನಿ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

‘ಮಹಿಳೆಯರಿಗಾಗಿ ಹಮ್ಮಿಕೊಂಡ ಕ್ರೀಡಾಕೂಟವನ್ನು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಉದ್ಘಾಟಿಸಲಿದ್ದಾರೆ. ಥ್ರೋಬಾಲ್‌, ಗುಂಡು ಎಸೆತ, ಗೋಣಿಚೀಲದ ಓಟ ಸೇರಿ ಹಲವು ಕ್ರೀಡೆಗಳು ನಡೆಯಲಿವೆ. ಅ.15ರಂದು ಬೆಳಿಗ್ಗೆ 7.30ಕ್ಕೆ ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತಾ ಆಂದೋಲನ ನಡೆಯಲಿದೆ. ಮಹಾಂತ ರುದ್ರೇಶ್ವರ ಸ್ವಾಮೀಜಿ, ಯಾದವಾನಂದ ಸ್ವಾಮೀಜಿ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ಪಾಲ್ಗೊಳ್ಳಲಿದ್ದಾರೆ’ ಎಂದರು.

ಕೃಷಿ ಮೇಳ, ಶ್ವಾನ ಪ್ರದರ್ಶನ

ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅ.16ರಂದು ಬಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಪ್ರಮುಖ ಕಾರ್ಯಕ್ರಮಗಳು ಆರಂಭವಾಗಲಿವೆ. ಬೆಳಿಗ್ಗೆ 10ಕ್ಕೆ ಶ್ವಾನ, ಉತ್ತಮ ಜೋಡೆತ್ತು, ಸಾಕು ಪ್ರಾಣಿಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 11ಕ್ಕೆ ಕೃಷಿ ಮೇಳ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯ ಪ್ರಗತಿ ನೋಟದ ಕುರಿತು ಚರ್ಚೆ ನಡೆಯಲಿದೆ. ಈಶ್ವರಾನಂದಪುರಿ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ, ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಪಾಲ್ಗೊಳ್ಳಲಿದ್ದಾರೆ.

ಮುರುಘಾ ಶ್ರೀ ಮತ್ತು ಶೌರ್ಯ ಪ್ರಶಸ್ತಿ ಪ್ರದಾನ ಸಮಾರಂಭ ಅಂದು ಸಂಜೆ ನಡೆಯಲಿದೆ. ರಾಚೋಟೇಶ್ವರ ಸ್ವಾಮೀಜಿ, ಜಯದೇವ ಸ್ವಾಮೀಜಿ, ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ಭಾಗವಹಿಸಲಿದ್ದಾರೆ.

ವಚನ, ಮಹಿಳಾ ಗೋಷ್ಠಿ

ವಚನ ಪಿತಾಮಹ ಫ.ಗು.ಹಳಕಟ್ಟಿ ವಿಚಾರ ಸಂಕಿರಣ ಅ.17ರಂದು ನಡೆಯಲಿದೆ. ಗುರುಮಹಾಂತ ಸ್ವಾಮೀಜಿ, ಶಾಸಕರಾದ ಗೋವಿಂದ ಎಂ.ಕಾರಜೋಳ, ಎಂ.ಬಿ. ಪಾಟೀಲ, ಸಾಹಿತಿ ಬಸವರಾಜ ಕಲ್ಗುಡಿ ಭಾಗವಹಿಸಲಿದ್ದಾರೆ. ಬಳಿಕ ‘ವಚನ ಗುಮ್ಮಟ’ ನಾಟಕ ಪ್ರದರ್ಶನವಾಗಲಿದೆ. ‘ಅವಿಭಕ್ತ ಕುಟುಂಬ ಮತ್ತು ಮಹಿಳೆ’ ಗೋಷ್ಠಿಯಲ್ಲಿ ವಸುಂಧರಾ ಭೂಪತಿ ಹಾಗೂ ಸುಧಾ ಬರಗೂರು ಭಾಗವಹಿಸಲಿದ್ದಾರೆ. ಹಾಡುಗಾರ್ತಿ ಕೊಪ್ಪಳದ ಗಂಗಮ್ಮ ಅವರನ್ನು ಸನ್ಮಾನಿಸಲಾಗುತ್ತದೆ.

ಲಿಂಗಾಯತ ಸ್ವತಂತ್ರ ಧರ್ಮ - ಮುನ್ನೋಟ’ ಗೋಷ್ಠಿ ಅ.18ರಂದು ಬೆಳಿಗ್ಗೆ 11ಕ್ಕೆ ಆರಂಭವಾಗಲಿದೆ. ಸಿದ್ಧರಾಮ ಸ್ವಾಮೀಜಿ, ಚಿದಾನಂದ ಸ್ವಾಮೀಜಿ ಸೇರಿ ಹಲವು ಮಠಾಧೀಶರು, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ್‌, ಪ್ರೊ.ಬಸವರಾಜ ಸಬರದ ಪಾಲ್ಗೊಳ್ಳಲಿದ್ದಾರೆ. ‘ಜಾತಿ ಧ್ರುವೀಕರಣ ಮತ್ತು ಧಾರ್ಮಿಕ ವಿಕೇಂದ್ರೀಕರಣ’ ಚರ್ಚೆಯೂ ನಡೆಯಲಿದೆ.

ಶೂನ್ಯಪೀಠಾರೋಹಣ

ಅ.19ರಂದು ಶರಣ ಸಂಸ್ಕೃತಿ ಉತ್ಸವ ಹಾಗೂ ಜನಪದ ಕಲಾ ಮೇಳ ನಡೆಯಲಿದೆ. ಮುಮ್ಮಡಿ ನಿರ್ವಾಣ ಸ್ವಾಮೀಜಿ ಇದಕ್ಕೆ ಚಾಲನೆ ನೀಡಲಿದ್ದಾರೆ. ಮಲ್ಲಿಕಾರ್ಜುನ ಸ್ವಾಮೀಜಿ ಉಪಸ್ಥಿತರಿರುತ್ತಾರೆ. ಅನುಭವ ಮಂಟಪದಲ್ಲಿ ಮಕ್ಕಳ ಮೇಳ ನಡೆಯಲಿದೆ. ಅ.20ರಂದು ಶರಣರ ಶೂನ್ಯಪೀಠಾರೋಹಣ, ಅಲ್ಲಮಪ್ರಭುಗಳ ಭಾವಚಿತ್ರ, ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ ಜರುಗಲಿದೆ. ಶರಣ ಪರಂಪರೆಗೆ ಮುರುಘಾ ಪರಂಪರೆಯ ಕೊಡುಗೆ ಚರ್ಚೆ ನಡೆಯಲಿದೆ.

ಅ.20ರಂದು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರ 24ನೇ ಸ್ಮರಣೋತ್ಸವ ನಡೆಯಲಿದೆ. ಜನಪದ ಕಲರವಕ್ಕೆ ಪ್ರಸನ್ನ ವಾಲ್ಮೀಕಿ ಸ್ವಾಮೀಜಿ, ರೇವಣಸಿದ್ಧೇಶ್ವರ ಸ್ವಾಮೀಜಿ, ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಆಗಮಿಸಲಿದ್ದಾರೆ. ಅ.22ರಂದು ಯುವಜನೋತ್ಸವ ನಡೆಯಲಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಭಾಗವಹಿಸಲಿದ್ದಾರೆ.

ಸಂಸದ ಎಂ. ಚಂದ್ರಪ್ಪ, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT