ಚಂದ್ರವಳ್ಳಿ ಕೆರೆಗೆ ಬಾಗಿನ ಸಮರ್ಪಿಸಿದ ಶಿವಮೂರ್ತಿ ಮುರುಘಾ ಶರಣರು

ಚಿತ್ರದುರ್ಗ: ‘ಮಾನವ ಅತಿಯಾದ ದುರಾಸೆಯಿಂದ ಪ್ರಕೃತಿ ನಾಶ ಮಾಡಲು ಮುಂದಾಗುತ್ತಿದ್ದಾನೆ. ಆದರೆ, ನಿಸರ್ಗ, ಕಾಲ, ಧರ್ಮವೇ ಮನುಕುಲವನ್ನು ದುರಸ್ತಿ ಪಡಿಸಲು ಮುಂದಾಗುತ್ತಿದೆ’ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ಚಂದ್ರವಳ್ಳಿ ಕೆರೆಯಲ್ಲಿ ಚಂದ್ರವಳ್ಳಿ ವಾಯುವಿಹಾರಿ ಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ‘ಬಾಗಿನ ಸಮರ್ಪಣೆ, ಕೆರೆಗೆ ಮೀನಿನ
ಮರಿಗಳನ್ನು ಬಿಡುವ’ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
‘ಮಾನವನ ಎಲ್ಲಾ ರೀತಿಯ ಪ್ರಕೃತಿ ವಿರೋಧಿ ಚಟುವಟಿಕೆಯನ್ನು ನಿಸರ್ಗ ನಿಯಂತ್ರಿಸುತ್ತಿದೆ. ಪ್ರಾದೇಶಿಕ ಅಸಮಾನತೆಯನ್ನು ಉಂಟು ಮಾಡಿದರೂ ಎಲ್ಲವನ್ನು ಸಮನ್ವಯಗೊಳಿಸುತ್ತಿದೆ. ಮಾನವರ ಅತಿಕ್ರಮಣದ ಕಾರಣಕ್ಕೆ ಕಾಡಿನಲ್ಲಿ ಇರಬೇಕಿದ್ದ ಪ್ರಾಣಿಗಳು ನಾಡಿನೊಳಗೆ ಬಂದು ದಾಳಿ ಮಾಡುತ್ತಿವೆ. ಪ್ರಕೃತಿ, ಪ್ರಾಣಿ, ಮಾನವರ ನಡುವೆ ಸಂಘರ್ಷ ನಡೆಯುತ್ತಿರುವುದು ನಿಲ್ಲಬೇಕಾದರೆ ಕಾಡು ಪ್ರಾಣಿಗಳ ಸಂತತಿ ಉಳಿಸಬೇಕಿದೆ’ ಎಂದು ಸಲಹೆ ನೀಡಿದರು.
ಸಿದ್ದಯ್ಯನ ಕೋಟೆ ಬಸವಲಿಂಗ ಸ್ವಾಮೀಜಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಟಿ. ಬದರಿನಾಥ್, ಬಿಜೆಪಿ ಯುವ ಮುಖಂಡ ಸಿದ್ದಾರ್ಥ ಗುಂಡಾರ್ಪಿ, ಬಳಗದ ಎನ್. ಸತ್ಯನಾರಾಯಣಾಚಾರ್, ಓಂಕಾರಪ್ಪ, ಲಕ್ಷ್ಮಣ್, ಸುರೇಶ್, ಅರವಿಂದ್, ನಗರಸಭೆ ಸದಸ್ಯ ಜೆ. ಶಶಿಧರ್, ವಿಶ್ವಕರ್ಮ ಯುವಕ ಸಮಾಜದ ಅಧ್ಯಕ್ಷ ಸಂಜಯ್, ಶಂಕರಮೂರ್ತಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.