ಮೊಳಕಾಲ್ಮುರು: ನಾಯಕ ಜನಾಂಗದ ವೀರ ಪುರುಷ ಎನಿಸಿಕೊಂಡಿರುವ ಮದಕರಿ ನಾಯಕನ ಸ್ಮಾರಕವನ್ನು ಮೈಸೂರು ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ಬುಧವಾರ ಮದಕರಿ ನಾಯಕ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.
ಅಲ್ಲಿನ ಪಶ್ಚಿಮ ವಾಹಿನಿಯಲ್ಲಿ ಕೂಡಲೇ ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಸ್ಥಳ ನಿಗದಿ ಮಾಡಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಚಿತ್ರದುರ್ಗದಲ್ಲಿ ‘ಮದಕರಿ ನಾಯಕ ಥೀಮ್ ಪಾರ್ಕ್’ ಶೀಘ್ರ ಅನುಷ್ಠಾನಕ್ಕೆ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಅ. 13ರಂದು ಮದಕರಿ ನಾಯಕನ ಜನ್ಮದಿನವಾಗಿದ್ದು, ನಾಡ ದೊರೆ ಎಂದು ಖ್ಯಾತಿ ಪಡೆದಿರುವ ಅವರ ಜನ್ಮ ದಿನಕ್ಕೆ ಸರ್ಕಾರ ರಜೆ ಘೋಷಣೆ ಮಾಡಬೇಕು. ಸರ್ಕಾರ ಈವರೆಗೆ ಮದಕರಿ ನಾಯಕರನ್ನು ಕುರಿತು ನೀಡಿರುವ ಭರವಸೆಗಳನ್ನು ಕಾರ್ಯರೂಪಕ್ಕೆ ತರಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಹಶೀಲ್ದಾರ್ ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದರು. ವಿ.ವಿಜಯ್, ರವಿಚಂದ್ರ, ಗೌಡ್ರ ಚಂದ್ರಣ್ಣ, ಸೂರಮ್ಮನಹಳ್ಳಿ ನಾಗರಾಜ್, ಶಿವಕುಮಾರ್, ಮರ್ಲಹಳ್ಳಿ ಬೋರಣ್ಣ, ಸೂರ್ಯ ಪ್ರಕಾಶ್, ಭೀಮಣ್ಣ, ಗೋವಿಂದಪ್ಪ, ಟೈಲರ್ ತಿಪ್ಪೇಸ್ವಾಮಿ, ನಾಗಸಮುದ್ರ ಗೋವಿಂದಪ್ಪ ಭಾಗವಹಿಸಿದ್ದರು.