ಚಿತ್ರದುರ್ಗ: ಮನೆಯ ಜಾಗದ ವಿಚಾರದಲ್ಲಿ ಕುಪಿತರಾಗಿ ಕೊಲೆಗೆ ಯತ್ನಿಸಿದ ಇಬ್ಬರು ಅಪರಾಧಿಗಳಿಗೆ ಆರು ವರ್ಷ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಆದೇಶಿಸಿದೆ.
ಮೊಳಕಾಲ್ಮುರು ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಗವಿಸಿದ್ಧಪ್ಪ ಹಾಗೂ ಕರಿಚಿತ್ತಪ್ಪ ಶಿಕ್ಷೆಗೆ ಗುರಿಯಾದವರು. ಗಾಯಾಳು ಕೃಷ್ಣಪ್ಪ ಎಂಬುವರಿಗೆ ₹ 1 ಲಕ್ಷ ಹಾಗೂ ಎಳ್ಳೆ ನಾಗಪ್ಪ ಎಂಬುವರಿಗೆ ₹ 50 ಸಾವಿರ ಪರಿಹಾರ ನೀಡಲು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಕೆ.ಗೀತಾ ಆದೇಶದಲ್ಲಿ ಸೂಚಿಸಿದ್ದಾರೆ.
ಗವಿಸಿದ್ಧಪ್ಪ, ಕರಿಚಿತ್ತಪ್ಪ ಹಾಗೂ ಎಳ್ಳೆನಾಗಪ್ಪ ಕುಟುಂಬಕ್ಕೆ ಜಾಗದ ವಿಚಾರದಲ್ಲಿ ವಿವಾದವಿತ್ತು. ಈ ಕುರಿತು ಎಳ್ಳೆನಾಗಪ್ಪ ಎಂಬುವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರಿಂದ ಕುಪಿತಗೊಂಡ ಅಪರಾಧಿಗಳು 2019ರ ಮೇ 7ರಂದು ಮಾರಕಾಸ್ತ್ರಗಳಿಗೆ ಹಲ್ಲೆ ನಡೆಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಪ್ರಧಾನ ಸರ್ಕಾರಿ ವಕೀಲ ಬಿ.ಗಣೇಶ ನಾಯ್ಕ್ ಸರ್ಕಾರದ ಪರ ವಾದ ಮಂಡಿಸಿದ್ದರು