ನಾಯಕನಹಟ್ಟಿ: ಇಲ್ಲಿನ ತಿಪ್ಪೇರುದ್ರಸ್ವಾಮಿ ಒಳಮಠ ದೇವಾಲಯಕ್ಕೆ ಶನಿವಾರಪೂಜೆಗೆ ಬಂದಿದ್ದಮಾರುತಿ ಇಕೋ ವಾಹನ ದೇವಾಲಯದ ಕಬ್ಬಿಣದ ಬಾಗಿಲಿಗೆ ಡಿಕ್ಕಿ ಹೊಡೆದು ವಾಹನ ಮತ್ತು ಬಾಗಿಲು ಜಖಂ ಆಗಿದೆ.
ತುರುವನೂರು ಗ್ರಾಮದ ವ್ಯಕ್ತಿಯೊಬ್ಬರು ವಾಹನ ಖರೀದಿಸಿದ್ದರು. ಇದರ ಪೂಜೆಗಾಗಿ ಕುಟುಂಬ ಸಮೇತ ಮನೆದೇವರಾದ ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಬಂದಿದ್ದರು.
ವಾಹನ ಪೂಜೆಗಾಗಿ ಹೂವು, ನಿಂಬೆಹಣ್ಣು, ಕಾಯಿಗಳನ್ನು ಅರ್ಚಕರಿಗೆ ನೀಡಿ ನಿಂತಿದ್ದರು. ಆಗ ವಾಹನದಲ್ಲಿದ್ದ ಕುಟುಂಬದ ಯುವಕನೊಬ್ಬ ವಾಹನದ ಕೀ ತಿರುಗಿಸಿ ಅಕ್ಸಿಲೇಟರ್ ಒತ್ತಿದ್ದಾನೆ. ಆಗ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನದ ಒಂದು ಬದಿ ಜಖಂ ಆಗಿದ್ದು, ದೇವಾಲಯದ ಬಾಗಿಲೂ ಜಖಂ ಆಗಿದೆ.
ಭಕ್ತರು ಹಾಗೂ ಸಿಬ್ಬಂದಿಗೆ ಯಾವುದೇ ಅಪಾಯವಾಗಿಲ್ಲ. ದೇವಾಲಯದ ಸಿಬ್ಬಂದಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ.