ಹೊಳಲ್ಕೆರೆ: ಪರೀಕ್ಷೆ ಬಗ್ಗೆ ಭಯ ಪಡದೆ ಆತ್ಮವಿಶ್ವಾಸದಿಂದ ಬರೆಯಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸುರೇಂದ್ರ ನಾಥ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪಟ್ಟಣದ ಎಂಎಂ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಂಗಳವಾರ ಏರ್ಪಡಿಸಿದ್ದ ‘ನನ್ನ ಪರೀಕ್ಷಾ ಕೇಂದ್ರ, ನನ್ನ ಪರೀಕ್ಷೆ’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸುತ್ತಿದ್ದು, ಲಭ್ಯವಿರುವ ದಿನಗಳಿಗೆ ಅನುಗುಣವಾಗಿ ವಿಷಯಗಳನ್ನು ಹಂಚಿಕೆ ಮಾಡಿಕೊಂಡು ಅಧ್ಯಯನ ಮಾಡಬೇಕು. ಕ್ರಮ ಅರಿತು ಓದಿದರೆ ಉತ್ತಮ ಸಾಧನೆ ಮಾಡಬಹುದು. ಶಿಕ್ಷಕರು ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆ ಭಯ ಹುಟ್ಟಿಸದೆ ಸಂಭ್ರಮದಿಂದ ಪರೀಕ್ಷೆ ಬರೆಯುವಂತೆ ಮಾನಸಿಕವಾಗಿ ಸಿದ್ಧಪಡಿಸಬೇಕು. ವಿದ್ಯಾರ್ಥಿಗಳಲ್ಲಿನ ಗೊಂದಲಗಳನ್ನು ಪರಿಹರಿಸಬೇಕು. ಯಾವುದೇ ವಿಷಯದಲ್ಲಿ ಸಮಸ್ಯೆಗಳಿದ್ದರೆ ಸಮಾಧಾನವಾಗಿ ಪರಿಹಾರ ನೀಡಬೇಕು ಎಂದು ಸಲಹೆ ನೀಡಿದರು.
ಉಪ ಪ್ರಾಂಶುಪಾಲ ಗೋವಿಂದ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಎಂಎಂ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ಒಳಪಡುವ ವಾಗ್ದೇವಿ ಇಂಟರ್ ನ್ಯಾಷನಲ್ ಶಾಲೆ, ರಂಗನಾಥ ಸ್ವಾಮಿ ಪ್ರೌಢಶಾಲೆ, ಗುಂಡೇರಿ ಹಾಗೂ ಆಡನೂರು ಪ್ರೌಢಶಾಲೆಗಳ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಸಂಪನ್ಮೂಲ ಶಿಕ್ಷಕರಾದ ಕೆ.ಎಂ.ಮೋಹನ್, ವೀರೇಶ್ ಕುಮಾರ್, ಮಾರುತಿ, ಪರಮೇಶ್ವರಪ್ಪ, ಜನತಾ ಹಾಗೂ ಭವ್ಯಾ ವಿದ್ಯಾರ್ಥಿಗಳಿಗೆ ವಿಷಯಾವಾರು ಮಾರ್ಗದರ್ಶನ ನೀಡಿದರು.
ಎಂಎಂ ಸರ್ಕಾರಿ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಒಳಪಡುವ ಪ್ರೌಢಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.