ಚಿತ್ರದುರ್ಗ: ನಗರದ ರೋಟರಿ ಬಾಲ ಭವನದ ಎದುರಿಗಿರುವ ಉದ್ಯಾನದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲು ಗುಂಡಿ ತೆಗೆಯುತ್ತಿದ್ದ ವೇಳೆ ಎರಡು ವೀರ ಮಾಸ್ತಿ ಕಲ್ಲುಗಳು ಪತ್ತೆಯಾಗಿವೆ !
ಕಾಂಪೌಂಡ್್ ನಿರ್ಮಿಸಲು ತಳಹದಿಗಾಗಿ ಗುಂಡಿ ತೆಗೆಯುವಾಗ ಈ ಎರಡು ವೀರಮಾಸ್ತಿ ಕಲ್ಲುಗಳು ಪತ್ತೆ ಯಾಗಿವೆ. ಕಾಂಪೌಂಡ್ ನಿರ್ಮಾಣದ ವೇಳೆ ಪತ್ತೆಯಾದ ಈ ಪುರಾತನ ಕಲ್ಲುಗಳನ್ನು ಗುತ್ತಿಗೆದಾರ ಶಿವಕುಮಾರ್ ಸುರಕ್ಷಿತವಾಗಿ ಸಂಗ್ರಹಿಸಿಟ್ಟಿದ್ದಾರೆ. ನಂತರ ಸ್ನೇಹಿತ ಗೋಪಾಲ ಸ್ವಾಮಿ ನಾಯಕ್ಗೆ ತಿಳಿಸಿದ್ದಾರೆ. ಗೋಪಾಲ್ ಅವರು ಇತಿಹಾಸ ಸಂಶೋಧಕ ಬಿ.ರಾಜ ಶೇಖರಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. ಸೋಮವಾರ ಉದ್ಯಾನಕ್ಕೆ ಭೇಟಿ ನೀಡಿದ ರಾಜಶೇಖರಪ್ಪ ಅವರು ಈ ಕಲ್ಲುಗಳನ್ನು ಪರಿಶೀಲಿಸಿ, ‘ಇದು 16–17ನೇ ಶತಮಾನದ ಕಲ್ಲುಗಳಾಗಿವೆ. ಈ ಕಲ್ಲಿನಲ್ಲಿ ವೀರನೂ ಇದ್ದಾನೆ. ಮಾಸ್ತಿಯೂ ಇದ್ದಾಳೆ. ಹಾಗಾಗಿ ಈ ಕಲ್ಲುಗಳನ್ನು ವೀರಮಾಸ್ತಿ ಕಲ್ಲುಗಳು ಎನ್ನುತ್ತಾರೆ. ಪತ್ತೆಯಾಗಿರುವ ಒಂದು ಕಲ್ಲಿನಲ್ಲಿರುವ ವೀರ ಮತ್ತು ಮಾಸ್ತಿ ಇಬ್ಬರಿಗೂ ಜಡೆ ಇರುವುದು ವಿಶೇಷ’ ಎಂದರು.
‘ಎರಡು ಕಲ್ಲುಗಳನ್ನು ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯಕ್ಕೆ ಕೊಡಿ’ ಎಂದು ರಾಜಶೇಖರಪ್ಪ ಅವರು ಸ್ಥಳದಲ್ಲಿದ್ದ ಗೋಪಾಲ ಸ್ವಾಮಿ ನಾಯಕ್, ಮಂಜುನಾಥ್ ಗುಪ್ತ ಮತ್ತು ಗುರುಸಿದ್ದಪ್ಪ ಅವರಿಗೆ ತಿಳಿಸಿದರು.