ಚಿತ್ರದುರ್ಗ: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ವಿಪುಲ್ ಬನ್ಸಾಲ್ ಗುರುವಾರ ಅಧಿಕಾರ ಸ್ವೀಕರಿಸಿದರು.ಫೆ. 20ರಂದು ಅಮ್ಲಾನ್ ಆದಿತ್ಯ ಬಿಸ್ವಾಸ್ ಬಳ್ಳಾರಿಗೆ ವರ್ಗಾವಣೆಯಾದ ನಂತರ ಈ ಸ್ಥಾನ ತೆರವಾಗಿತ್ತು. ಹೆಚ್ಚುವರಿ ಜಿಲ್ಲಾಧಿಕಾರಿ ಎ.ಎಸ್. ನಿರ್ವಾಣಪ್ಪ ಅವರು ಪ್ರಭಾರ ಜಿಲ್ಲಾಧಿಕಾರಿಯಾಗಿ ಅಂದಿನಿಂದ ಕಾರ್ಯ ನಿರ್ವಹಿಸುತ್ತಿದ್ದರು.
ಡಾ.ಅಜಯ್ ನಾಗಭೂಷಣ್ ಸೇರಿದಂತೆ ಹಲವರ ಹೆಸರುಗಳು ಜಿಲ್ಲಾಧಿಕಾರಿ ಸ್ಥಾನಕ್ಕೆ ಕೇಳಿಬಂದಿದ್ದರೂ ಯಾರೂ ಇತ್ತ ಮುಖ ಮಾಡಲಿಲ್ಲ. ಕೊನೆಗೆ ಸರ್ಕಾರ ವಿಪುಲ್ ಬನ್ಸಾಲ್ ಅವರನ್ನು ಜಿಲ್ಲಾಧಿಕಾರಿಯನ್ನಾಗಿ ನೇಮಿಸಿತು.
ಪಾರದರ್ಶಕ ಆಡಳಿತ: ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್, ಯಾವುದೇ ವಿಷಯದಲ್ಲಿ ನಾನು ಪೂರ್ವಾಗ್ರಹ ಪೀಡಿತನಾಗಿಲ್ಲ. ಪಾರದರ್ಶಕ, ಸಂವೇದನಾಶೀಲ ಮತ್ತು ಪ್ರಾಮಾಣಿಕ ಆಡಳಿತ ನೀಡುವುದು ಪ್ರಥಮ ಉದ್ದೇಶ ಎಂದು ನುಡಿದರು.
ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ. ಸುಪ್ರೀಂಕೋರ್ಟ್ ಸಹ ಈ ವಿಷಯದಲ್ಲಿ ನಿಗಾ ವಹಿಸಿದೆ. ಜಿಲ್ಲೆಯಲ್ಲಿನ ಗಣಿಗಾರಿಕೆ ಬಗ್ಗೆ ಮಾಹಿತಿ ಪಡೆದು, ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಕ್ರಮಕೈಗೊಳ್ಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬದಲಾವಣೆ ಪ್ರಯತ್ನ
ಸ್ಥಳೀಯ ಸಮಸ್ಯೆಗಳಿಗೆ, ಸ್ಥಳೀಯ ಮಟ್ಟದಲ್ಲೇ ಪರಿಹಾರ ದೊರಕುವುದರಿಂದ ಸ್ಥಳೀಯವಾಗಿ ಬಗೆಹರಿಸಿಕೊಳ್ಳಬೇಕು. ಎಲ್ಲವನ್ನು ವಿಶ್ಲೇಷಿಸಿ ಆಡಳಿತದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡುತ್ತೇನೆ. ಮುಖ್ಯವಾಗಿ ಜನರ ಸಮಸ್ಯೆಗಳಿಗೆ ಪರಿಹಾರ ದೊರಕೊಡಿಸಿಕೊಡಲು ಪ್ರಾಮಾಣಿಕ ಯತ್ನಿಸುತ್ತೇನೆ ಎಂದು ವಿವರಿಸಿದರು.