ಚಿತ್ರದುರ್ಗ: ‘ಸೋತವರು ಕುಗ್ಗದೆ ಗೆದ್ದವರು ಬೀಗದೆ ಸೋಲು- ಗೆಲುವು ಸಮಾನವಾಗಿ ಸ್ವೀಕರಿಸಿ’ ಎಂದು ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.
ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯುತ್ತಿರುವ 43ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್ಷಿಪ್ ಹೊನಲು ಬೆಳಕಿನ ಪಂದ್ಯಾವಳಿಯ 5ನೇ ದಿನದ ಸಭಾ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಮತ್ತು ಅವರ ಬಳಗ ವ್ಯವಸ್ಥಿತವಾಗಿ ಪಂದ್ಯಾವಳಿ ಆಯೋಜಿಸಿರುವುದು ಖುಷಿ ತಂದಿದೆ. ಇದು ಹೇಗೆ ಸಾಧ್ಯ ಎಂದು ಸ್ವಾಮೀಜಿಯನ್ನು ಕೇಳಿದ್ದಕ್ಕೆ ‘ಎಲ್ಲಾ ವರ್ಗದವರು ಸ್ವಪ್ರೇರಣೆಯಿಂದ ಬೆಂಬಲವಾಗಿ ನಿಂತಿದ್ದಾರೆ’ ಎಂದು ಉತ್ತರಿಸಿದರು. ಇದು ನಿಜಕ್ಕೂ ಸಂತೋಷದ ಸಂಗತಿ’ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
‘ಶಿಕ್ಷಣದ ಜತೆ ಮಕ್ಕಳಿಗೆ ಕ್ರೀಡೆಯೂ ಅತ್ಯವಶ್ಯಕ. ಕ್ರೀಡೆಯಿಂದ ಬುದ್ಧಿ ಚುರುಕಾಗಿ ಆರೋಗ್ಯವೂ ಉತ್ತಮವಾಗುತ್ತದೆ’ ಎಂದರು. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ‘ಯಾವುದೇ ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಜಾಣ್ಮೆ ಮತ್ತು ಬುದ್ಧಿವಂತಿಕೆಯಿಂದ ಚಿತ್ರದುರ್ಗದಲ್ಲಿ ರಾಷ್ಟ್ರೀಯ ಜೂನಿ ಯರ್ ವಾಲಿಬಾಲ್ ಪಂದ್ಯಾವಳಿಯನ್ನು ಸ್ವಾಮೀಜಿ ಆಯೋಜಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸದ ಬಿ.ಎನ್.ಚಂದ್ರಪ್ಪ, ವಿಧಾನಪರಿಷತ್ ಸದಸ್ಯೆ ಜಯಮ್ಮಬಾಲರಾಜ್, ನಗರಸಭೆ ಅಧ್ಯಕ್ಷ ಎಚ್.ಎನ್. ಮಂಜುನಾಥ ಗೊಪ್ಪೆ, ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಬೆಟ್ಟೆಗೌಡ, ರತ್ನಮ್ಮ ಇತರರು ಇದ್ದರು.
ರವಿ ಮಲ್ಲಾಪುರ ಸ್ವಾಗತಿಸಿದರು. ಶಿವರಾಂ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಾಲಿಬಾಲ್ ಸಂಸ್ಥೆಯ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.