ಬೆಂಗಳೂರು: ‘ಎಲ್ಲ ವಿಶ್ವವಿದ್ಯಾಲಯಗಳ ವ್ಯವಹಾರಗಳು ಜ. 1ರಿಂದ ಸಂಪೂರ್ಣವಾಗಿ ಇ-ಆಫೀಸ್ ಮೂಲಕವೇ ನಡೆಯಲಿದ್ದು, ಎಲ್ಲ ಕಡತ ಮತ್ತು ಪತ್ರಗಳು ಇ- ಆಫೀಸ್ ಮೂಲಕವೇ ನಿರ್ವಹಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
‘ಈಗಾಗಲೇ ಉನ್ನತ ಶಿಕ್ಷಣ ಇಲಾಖೆ ಸಂಪೂರ್ಣವಾಗಿ ಇ-ಆಫೀಸ್ ಮೂಲಕವೇ ನಡೆಯುತ್ತಿದೆ. 2021 ವರ್ಷವನ್ನು ಇ-ಆಫೀಸ್ ವ್ಯವಸ್ಥೆಯ ಮೂಲಕ ಆರಂಭಿಸುತ್ತೇನೆ. ಕ್ಷಿಪ್ರ ಮತ್ತು ಪಾರದರ್ಶಕವಾಗಿ ಜನಪರ ಕಾರ್ಯಗಳ ಅನುಷ್ಠಾನಕ್ಕೆ ಈ ರೀತಿಯಲ್ಲಿ ವ್ಯವಸ್ಥೆ ಅಗತ್ಯವಾಗಿದೆ’ ಎಂದು ಅವರು ಹೇಳಿದ್ದಾರೆ.
‘ಗುರುವಾರ ರಾತ್ರಿ ( ಡಿ. 31) ಒಂಬತ್ತು ಗಂಟೆಯವರೆಗೆ ಗೃಹ ಕಚೇರಿಯಲ್ಲಿದ್ದು ಎಲ್ಲ ಕಡತಗಳನ್ನು ವಿಲೇವಾರಿ ಮಾಡಿದ್ದೇನೆ. ನನ್ನ ವ್ಯಾಪ್ತಿಯ ಯಾವುದೇ ಇಲಾಖೆಯಲ್ಲಿ ಯಾವ ಕಡತವೂ ಬಾಕಿ ಬಿದ್ದಿಲ್ಲ. ಇದರಿಂದ ನನ್ನ ಕರ್ತವ್ಯದ ಬಗ್ಗೆ ಸಂಪೂರ್ಣತೆಯ ಭಾವ ಬಂದಿದೆ’ ಎಂದೂ ಅವರು ಹೇಳಿದ್ದಾರೆ.