ಚಿಂಚೋಳಿ: 2020ನ್ನು ವಿಪತ್ತುಗಳ ವರ್ಷ ಎಂದು ಘೋಷಿಸಿ ಸಂಕಷ್ಟಕ್ಕೆ ಒಳಗಾದವರಿಗೆ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ್ ಒತ್ತಾಯಿಸಿದರು.
ತಾಲ್ಲೂಕಿನ ವಿವಿಧೆಡೆ ನೆರೆ ಹಾವಳಿ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಜನರ ಅಹವಾಲು ಆಲಿಸಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.
ಜನರನ್ನು ಕೋವಿಡ್ ಹೈರಾಣಾಗಿಸಿದೆ. ಇದರಿಂದ ಶಿಕ್ಷಣ, ಉದ್ಯಮ, ಸಾರಿಗೆ ಮತ್ತು ಔದ್ಯೋಗಿಕ ಕ್ಷೇತ್ರಗಳ ಮೇಲೆ ಮಂಕು ಕವಿದಿದೆ. ಜತೆಗೆ ಜಿಲ್ಲೆಯಲ್ಲಿ ನೆರೆ ಹಾವಳಿ ಹೆಚ್ಚಾಗಿದೆ. ಸರ್ಕಾರ ವಿಳಂಬ ಮಾಡದೆ ಪ್ರವಾಹದಿಂದ ನಷ್ಟುಕ್ಕೊಳಗಾದ ಜನರಿಗೆ ಪರಿಹಾರ ನೀಡುವ ಮೂಲಕ ಧೈರ್ಯ ತುಂಬಬೇಕು ಎಂದು ಒತ್ತಾಯಿಸಿದರು.
ದೇಗಲಮಡಿ, ಕೊಳ್ಳೂರು, ನಾಗಾಈದಲಾಯಿ, ಕಲ್ಲೂರು ರೋಡ್ ಗ್ರಾಮಗಳಲ್ಲಿ ಜನರು ಮನೆಯಲ್ಲಿ ಇಟ್ಟಿದ್ದ ಪಡಿತರ ಅಕ್ಕಿಮಳೆ ನೀರು ನುಗ್ಗಿದ್ದರಿಂದ ನೆನೆದು ವಾಸನೆ ಬರುತ್ತಿದೆ. ಇದರಿಂದ ಜನರು ಊಟಕ್ಕೂ ಪರದಾಡುವಂತಾದೆ. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿ ತಾಲ್ಲೂಕಿನ ಪ್ರವಾಹ ಪೀಡಿತ ಗ್ರಾಮಗಳ ಜನರಿಗೆ ತಿಂಗಳ ಪಡಿತರವನ್ನು ಉಚಿತವಾಗಿ ಮತ್ತೊಮ್ಮೆ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಹಿರಿಯ ಮುಖಂಡ ಗೋಪಾಲರಾವ್ ಕಟ್ಟಿಮನಿ, ರವಿರಾಜ ಕೊರವಿ, ತಾ.ಪಂ. ಸದಸ್ಯ ಜಗನ್ನಾಥ ಈದಲಾಯಿ, ಸುದರ್ಶನರೆಡ್ಡಿ ಪಾಟೀಲ, ರಾಮಶೆಟ್ಟಿ ಪವಾರ, ಆರ್. ಗಣಪತರಾವ್, ಅನ್ವರ್ ಖತೀಬ್, ಚಾಂದ್, ಡಾ. ತುಕಾರಾ ಪವಾರ, ಸಂತೋಷ ರಾಠೋಡ್ ಇದ್ದರು.