ಉಳ್ಳಾಲ: ಬಿಜೆಪಿ ಸರಕಾರದ ಮುಸ್ಲಿಂ ವಿರೋಧಿ ಮನೋಭಾವದ ಮುಂದುವರಿದ ಭಾಗ ಹಾಗೂ ಬೆನ್ನೆಲುಬು ಇಲ್ಲದ ವಿರೋಧ ಪಕ್ಷಗಳ ಮೌನ ಸಮ್ಮತಿಯೇ 2ಬಿ ಮೀಸಲಾತಿ ರದ್ದುಗೊಳಿಸಲು ಪ್ರಮುಖ ಕಾರಣ ಎಂದು ಎಸ್ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರ ಚುನಾವಣಾ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ದೂರಿದರು.
2ಬಿ ಮೀಸಲಾತಿ ರದ್ದುಗೊಳಿಸಿದ ರಾಜ್ಯ ಸರ್ಕಾರದ ವಿರುದ್ಧ ದೇರಳಕಟ್ಟೆಯಲ್ಲಿ ಎಸ್ಡಿಪಿಐ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಬೊಮ್ಮಾಯಿ ಸರ್ಕಾರ ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿ ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯಕ್ಕೆ ಅದನ್ನು ಹಂಚಿದೆ. ಈ ಆದೇಶ ಹಿಂಪಡೆಯದೇ ಇದ್ದರೆ ರಾಜ್ಯದೆಲ್ಲೆಡೆ ಜನಾಂದೋಲನ ಹಮ್ಮಿಕೊಳ್ಳಲಾಗುವುದು. ಹಿಂದೂ ಮುಸ್ಲಿಮರು ಅನ್ಯೋನ್ಯತೆಯಿಂದ ಬದುಕುತ್ತಿರುವುದನ್ನು ಸಹಿಸದ ಫ್ಯಾಸಿಸ್ಟ್ ಶಕ್ತಿಗಳು ಮೀಸಲಾತಿ ರದ್ದತಿಯಂತಹ ಕೆಲಸ ಮಾಡಿ ಸಮಾಜದಲ್ಲಿ ಹುಳಿ ಹಿಂಡುತ್ತದೆ ಎಂದು ಅವರು ಹೇಳಿದರು.
ಎಸ್ಡಿಪಿಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಅತಾವುಲ್ಲ ಜೋಕಟ್ಟೆ, ರಹಿಮಾನ್ ಬೋಳಿಯಾರ್ ಮಾತನಾಡಿದರು. ಪ್ರತಿಭಟನೆಯಲ್ಲಿ ಎಸ್ಡಿಪಿಐ ಕ್ಷೇತ್ರ ಸಮಿತಿ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ, ರಾಜ್ಯ ನಾಯಕರಾದ ನವಾಝ್ ಉಳ್ಳಾಲ್, ಎಸ್ಡಿಪಿಐ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಶ್ರಫ್ ಮಂಚಿ, ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ, ಕೋಶಾಧಿಕಾರಿ ಲತೀಫ್ ಕೋಡಿಜಾಲ್, ಕ್ಷೇತ್ರ ಸಮಿತಿ ಸದಸ್ಯರಾದ ನೌಷಾದ್ ಕಿನ್ಯ, ಸುಹೈಲ್ ಉಳ್ಳಾಲ್, ಉಳ್ಳಾಲ ನಗರ ಸಮಿತಿ ಅಧ್ಯಕ್ಷ ಅಬ್ಬಾಸ್ ಎ.ಆರ್, ಉಪಾಧ್ಯಕ್ಷ ಇಂತಿಯಾಝ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.