ಕಲಬುರ್ಗಿ: ಈಶಾನ್ಯ ಪದವೀಧರರ ಕ್ಷೇತ್ರದಿಂದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿಯಾಗಿ ವಾಟಾಳ್ ನಾಗರಾಜ್ ಬೆಂಬಲಿಗರೊಂದಿಗೆ ಮಿನಿ ವಿಧಾನಸೌಧದಲ್ಲಿ ಮಂಗಳವಾರ ನಾಮಪತ್ರ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರ್ನಾಟಕ ಏಕೀಕರಣದ ಉದ್ದೇಶ ಇನ್ನೂ ಈಡೇರಿಲ್ಲ. ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗಗಳು ಈಗಲೂ ಹಿಂದುಳಿದಿವೆ. ಇದುವರೆಗೆ ಆಡಳಿತ ನಡೆಸಿರುವ ಎಲ್ಲಾ ಪಕ್ಷಗಳೂ ಈ ಭಾಗವನ್ನು ಕಡೆಗಣಿಸಿವೆ. ಈ ಭಾಗ ಅಭಿವೃದ್ಧಿ ಆಗಬೇಕಾದರೆ ವಿಧಾನಸಭೆ ಅಥವಾ ವಿಧಾನ ಪರಿಷತ್ನಲ್ಲಿ ಗಟ್ಟಿಯಾಗಿ ಹೋರಾಟ ಮಾಡಬೇಕಾಗಿದೆ. ಈ ಕಾರಣಕ್ಕಾಗಿ ಈಶಾನ್ಯ ಪದವೀಧರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದೇನೆ’ ಎಂದು ತಿಳಿಸಿದರು.
‘ನಾಡು, ನುಡಿ ಮತ್ತು ಗಡಿ ಬಗ್ಗೆ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದ್ದೇನೆ. ಅಧಿಕಾರದ ಆಸೆಗಾಗಿ ಎಂದೂ ರಾಜಿಯಾಗಿಲ್ಲ. 371 (ಜೆ) ಕಾಯ್ದೆ, ಮಹದಾಯಿಗೆ ಸಂಬಂಧಿಸಿದಂತೆಯೂ ಹೋರಾಟ ಮಾಡಿದ್ದೇನೆ. ಪದವೀಧರ ಕ್ಷೇತ್ರದ ಮತದಾರರು ಆಶೀರ್ವಾದ ಮಾಡಿದರೆ ನನ್ನ ಹೋರಾಟಕ್ಕೆ
ಶಕ್ತಿ ಬರುತ್ತದೆ’ ಎಂದು ಹೇಳಿದರು.
ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದ ಮಾತನಾಡಿ, ‘ವಾಟಾಳ್ ನಾಗರಾಜ್ ಕನ್ನಡದ ಕೂಗು. ವಿಧಾನಸಭೆ, ವಿಧಾನ ಪರಿಷತ್ಗೆ ಇಂತಹವರು ಬೇಕು. ಆದ್ದರಿಂದ ಮತದಾರರು ಅವರಿಗೆ ಆಶೀರ್ವಾದ ಮಾಡಬೇಕು’ ಎಂದು ಮನವಿ ಮಾಡಿದರು.
ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಪ್ರವೀಣಶೆಟ್ಟಿ, ಕೆ.ಆರ್.ಕುಮಾರ್ ಇದ್ದರು.