ಬೆಳ್ತಂಗಡಿ (ದಕ್ಷಿಣ ಕನ್ನಡ): ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಆಶ್ರಯವಾಗಿದ್ದ ಸೋಮಾವತಿ ನದಿಯಲ್ಲಿ ಸಾವಿರಾರು ಮೀನು ಸತ್ತಯ ಬಿದ್ದಿವೆ. ನೀರಿಗೆ ಕಿಡಿಕೇಡಿಗಳು ವಿಷ ಪದಾರ್ಥ ಹಾಕಿರುವ ಪರಿಣಾಮ ಮೀನುಗಳು ಸತ್ತಿರಬಹುದೆಂದು ಶಂಕಿಸಲಾಗಿದೆ.
ನಗರಕ್ಕೆ ನೀರು ಸರಬರಾಜು ಮಾಡುವ ನದಿಯಲ್ಲಿದ್ದ ಪ್ರಮುಖ ಘಟಕ ಇಲ್ಲಿದೆ.
ಮೂರು ವರ್ಷದ ಹಿಂದೆ ಇದೇ ಸ್ಥಳದಲ್ಲಿ ಈ ರೀತಿಯ ಕೃತ್ಯ ನಡೆದಿತ್ತು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ವರ್ಷದ ಬಿಸಿಲಿನ ತಾಪಕ್ಕೆ ಎಲ್ಲ ನದಿಗಳೂ ಬತ್ತಿ ಹೋಗಿ ಕೃಷಿ ಮಾತ್ರವಲ್ಲ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ನಗರಕ್ಕೆ ಕುಡಿಯುವ ನೀರು ಪೂರೈಸುವ ನದಿ ನೀರಿನ ಘಟಕ ಈ ರೀತಿ ಆಗಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಕ್ಕೆ ಪ್ರಸಕ್ತ ಪ್ರತಿ ದಿನ 10 ಲಕ್ಷ ಲೀಟರ್ ನೀರಿನ ಅವಶ್ಯಕತೆಯಿದ್ದು ಇದೇ ನೀರನ್ನು ಅವಲಂಬಿಸಲಾಗಿತ್ತು. ಆದರೆ ವಿಷ ಪ್ರಾಶನವಾಗಿರುವ ಪರಿಣಾಮ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ಟ್ಯಾಂಕ್ ನೀರು ಖಾಲಿ ಮಾಡಿ ಸ್ವಚ್ಛಗೊಳಿಸಿ ಬೋರ್ ವೆಲ್ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ನಗರ ಪಂಚಾಯಿತಿ ಉಪಾಧ್ಯಕ್ಷ ಜಯಾನಂದ ಗೌಡ ತಿಳಿಸಿದ್ದಾರೆ