ಉಳ್ಳಾಲ( ಮಂಗಳೂರು): ಇಲ್ಲಿಗೆ ಸಮೀಪದ ಕುತ್ತಾರುಪದವು ಮಂಗಳ ಸೇವಾ ಸಮಿತಿಯ ಬಾಲ ಸಂರಕ್ಷಣಾ ಆಶ್ರಮದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುರುವಾರ ಬೆಳಿಗ್ಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಉಪಚುನಾವಣೆ ನಡೆದ ಶಿರಾ ಕ್ಷೇತ್ರದಲ್ಲಿ 25 ಸಾವಿರ ಮತಗಳ ಅಂತರದಲ್ಲಿ ಪಕ್ಷ ಜಯಭೇರಿ ಬಾರಿಸಲಿದೆ’ ಎಂದು ಭವಿಷ್ಯ ನುಡಿದರು.
‘ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನೆಡ್ಡಾ ಅವರ ಸೂಚನೆಯಂತೆ ಮೈಸೂರಿನಿಂದ ಪಕ್ಷ ಸಂಘಟನೆ ಗೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ’ ಎಂದರು.
‘ಕುತ್ತಾರು ಆಶ್ರಮದ ಸಂಘಟಕರು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರ ಮಗನಾಗಿರುವುದಕ್ಕೆ ಹೆಮ್ಮೆ ಇದೆ’ ಎಂದರು.
ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಕಾರ್ಯಕರ್ತರ ಪ್ರೀತಿ ವಿಶ್ವಾಸದೊಂದಿಗೆ ಬೆಳವಣಿಗೆ ಸಾಧಿಸಿಸುತ್ತಿದ್ದೇವೆ ಎಂದರು.
‘ಹುಟ್ಟುಹಬ್ಬ ಆಚರಿಸುವ ಉದ್ದೇಶವಿರಲಿಲ್ಲ, ಆದರೆ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಸರಳವಾಗಿ ಆಶ್ರಮದ ಮಕ್ಕಳ ಜತೆಗೆ ಆಚರಿಸಿದ್ದೇನೆ’ ಎಂದರು.
ಮಂಗಳೂರಿನಲ್ಲಿ ಗುರುವಾರ ನಡೆಯುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಬುಧವಾರ ರಾತ್ರಿ ಅವರು ನಗರಕ್ಕೆ ಬಂದು ವಾಸ್ತವ್ಯ ಹೂಡಿದ್ದರು.
ಆಶ್ರಮ ಸಂಘಟಕ ಅನಂತಕೃಷ್ಣ ಭಟ್, ಬಿಜೆಪಿ ಮುಖಂಡರುಗಳಾದ ಕಿಶೋರ್ ಕುಮಾರ್ ಪುತ್ತೂರು, ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಹಾಸ್ ಪಂಡಿತ್ ಹೌಸ್, ಗೋಪಾಲ್ ಕುತ್ತಾರ್, ರಾಜೀವ್ ಮೈಸೂರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.