ಮಾಡಬಾಳ್(ಮಾಗಡಿ): ‘ನಾಲ್ಕು ಬಾರಿ ಶಾಸಕರಾಗಿ ದುಡಿದು ದಣಿದಿರುವ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ಅವರನ್ನು ಮನೆಗೆ ಕಳಿಸಿ ವಿಶ್ರಾಂತಿ ಪಡೆಯಲಿ’ ಎಂದು ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ ಲೇವಡಿ ಮಾಡಿದರು.
ಹೋಬಳಿಯ ಮೇಗಳ ದೊಡ್ಡಿಯಲ್ಲಿ ಶುಕ್ರವಾರ ರೋಡ್ ಶೋ ನಡೆಸಿದ ನಂತರ ಮನೆ ಮನೆಗೆ
ತೆರಳಿ ಮತಯಾಚಿಸಿ ಮಾತನಾಡಿದರು.
‘ಜನರಿಗಾಗಿ ದುಡಿದಿದ್ದರೆ, ಯಾಕೆ ಕೈಮುಗಿಯಬೇಕಿತ್ತು. ಕಳೆದ 20 ವರ್ಷಗಳಲ್ಲಿ ಅವರು ಜನರಿಗಾಗಿ ಕೆಲಸ ಮಾಡದೆ ತಮ್ಮ 8 ಜನ ಹಿಂಬಾಲಕರಿಗಾಗಿ, ಅಧಿಕಾರಿಗಳ ಮೇಲೆ ಜೋರು ಮಾಡಿ ಅಭಿವೃದ್ಧಿ ಕಾಮಗಾರಿ ಮಾಡಿಸದೆ ಕಳ್ಳಬಿಲ್ ಮಾಡಿಸಿಕೊಟ್ಟು ಬಾಲು ಬ್ರಿಗೆಡ್ಸ್ಗಳ ಪ್ರಗತಿಗೆ ಮುಂದಾಗಿದ್ದಾರೆ’ ಎಂದು ಆರೋಪಿಸಿದರು.
‘ಹೇಮಾವತಿ ನದಿ ನೀರು ತಾಲ್ಲೂಕಿನ ಕೆರೆಗಳಿಗೆ ಹರಿಸುವುದೇ ನನ್ನ ಬಹುದೊಡ್ಡ ಕನಸು. ಎಚ್.ಡಿ.ಕುಮಾರ
ಸ್ವಾಮಿ ಮುಖ್ಯಮಂತ್ರಿ ಆಗುವುದು ಖಚಿತ. ಶ್ರೀರಂಗ ಯೋಜನೆಯ ಉಳಿದ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸಿ ಅನ್ನದಾತನ ಮುಖದಲ್ಲಿ ನಗು ನೋಡುವುದು ಸತ್ಯ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಕಾಂಗ್ರೆಸ್ ಅಭ್ಯರ್ಥಿ ಮೋಡಿ ಮಾತುಗಳಿಗೆ ಮರುಳಾಗಬೇಡಿ. ಪ್ರತಿಯೊಬ್ಬರು ಅವರನ್ನು ಪ್ರಶ್ನೆ ಮಾಡಿ. ಬಡವರ
ಮನೆಯ ಮಗನಾದ ನನಗೆ ನಿಮ್ಮ ಅಮೂಲ್ಯವಾದ ಮತ ನೀಡಿ. ಬಹುಮತದಿಂದ ಆಯ್ಕೆ ಮಾಡಿ, ನಿಮ್ಮ ಸೇವೆ ಮಾಡಲು ಒಂದೇ ಒಂದು ಅವಕಾಶ ಕೊಡಿ’ ಎಂದು ಮನವಿ ಮಾಡಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಸದಸ್ಯ ಶಂಕರ್, ಗ್ರಾಮ ಪಂಚಾಯಿತಿ ಸದಸ್ಯ ನಂಜುಂಡಪ್ಪ ಜೆಡಿಎಸ್ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು. ಮೇಗಳದೊಡ್ಡಿ, ಕಾಡು ಗೊಲ್ಲರಹಟ್ಟಿ, ಮತ್ತ, ಗವಿನಾಗಮಂಗಲ ಗ್ರಾಮಗಳಲ್ಲಿ ಎ.ಮಂಜು ಮತಯಾಚಿಸಿದರು.