ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿಭಜಿತ ದ.ಕ. ಜಿಲ್ಲೆಯಲ್ಲಿ 13 ಸ್ಥಾನ ಗೆಲ್ಲಲಿದೆ ಕಾಂಗ್ರೆಸ್‌:ಎಂ.ಬಿ.ಪಾಟೀಲ

Last Updated 26 ಸೆಪ್ಟೆಂಬರ್ 2022, 14:17 IST
ಅಕ್ಷರ ಗಾತ್ರ

ಮಂಗಳೂರು: ‘ಜಾತಿ, ಧರ್ಮದ ಹೆಸರಿನಲ್ಲಿ ದೇಶದ ಜನರನ್ನು ವಿಭಜಿಸಿ, ಪುಲ್ವಾಮ ಮತ್ತು ಬಾಲಾಕೋಟ್‌ ದಾಳಿಗಳನ್ನು ಮುಂದಿಟ್ಟುಕೊಂಡು ಜನರ ಭಾವನೆ ಕೆರಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಜನರ ಬದುಕನ್ನು ಕಟ್ಟುವ ಕಾರ್ಯವನ್ನು ಯಾವತ್ತೂ ಮಾಡಿಲ್ಲ. ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ರಾಜ್ಯವನ್ನು ಸ್ವಾರ್ಥ ರಾಜಕಾರಣಕ್ಕಾಗಿ ಹಾಳು ಮಾಡುತ್ತಿದೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಇಲ್ಲಿ ಏರ್ಪಡಿಸಿದ್ದ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಸೋಮವಾರ ಮಾತನಾಡಿದರು.

‘ಸಿದ್ದರಾಮಯ್ಯ ನೇತೃತ್ವದಲ್ಲಿ ಐದು ವರ್ಷಗ ಸುಭದ್ರ ಆಡಳಿತ ಒದಗಿಸಿದ ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ 168 ಭರವಸೆಗಳಲ್ಲಿ 159 ಭರವಸೆಗಳನ್ನು ಈಡೇರಿಸಿದೆ. ಹೆಚ್ಚುವರಿಯಾಗಿ 35 ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. 300ಕ್ಕೂ ಅಧಿಕ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಅದರಲ್ಲಿ ಒಂಬತ್ತು ಭರವಸೆಗಳನ್ನೂ ಈಡೇರಿಸಿಲ್ಲ’ ಎಂದರು.

‘ಬಿಜೆಪಿ ಅಧಿಕಾರಕ್ಕೆ ಬರುವವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಅಷ್ಟೂ ಸರ್ಕಾರಗಳು ಒಟ್ಟು ₹ 2.40 ಲಕ್ಷ ಕೋಟಿ ಸಾಲ ಮಾಡಿದ್ದವು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ₹ 1.20 ಲಕ್ಷ ಕೋಟಿ ಸಾಲ ಮಾಡಿತ್ತು. ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳದ ಬಿಜೆಪಿ ಮೂರೇ ವರ್ಷಗಳಲ್ಲಿ ₹ 3.5 ಲಕ್ಷ ಕೋಟಿ ಸಾಲ ಮಾಡಿದೆ. ಈ ಹಣದಲ್ಲೂ ಬಿಜೆಪಿಯವರು ಶೇ 40 ಲಂಚ ಪಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.

‘ಬಿಜೆಪಿ ಅಧಿಕಾರದ ಅವಧಿಯಲ್ಲಿ ಯಾವುದೇ ಸರ್ಕಾರಿ ಉದ್ಯೋಗ ಪಡೆಯುವುದಕ್ಕೂ ಲಂಚ ಕೊಡಬೇಕಾದ ಸ್ಥಿತಿ ಇದೆ. ಮುಖ್ಯಮಂತ್ರಿ ಹುದ್ದೆಯನ್ನೂ ಅವರು ಬಿಟ್ಟಿಲ್ಲ. ಅದಕ್ಕೂ ₹ 2,500 ಕೋಟಿ ನಿಗದಿಪಡಿಸಿದ್ದಾರೆ. ನಳಿನ್‌ ಕುಮಾರ್‌ ಕಟೀಲ್‌ ಆ್ಯಂಡ್‌ ಕಂಪನಿ ಲಂಚದ ಪ್ರಮಾಣವನ್ನು ಶೇ 80ಕ್ಕೆ ಹೆಚ್ಚಿಸಿದರೂ ಆಶ್ಚರ್ಯವಿಲ್ಲ. ಕೆಲಸವನ್ನೇ ಮಾಡದೇ ಶೇ 100ರಷ್ಟು ಅನುದಾನವನ್ನು ನುಂಗುವ ಹಂತಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತದೋ ಗೊತ್ತಿಲ್ಲ. ಬಿಜೆಪಿ ಅವಧಿಯಲ್ಲಿ ಆಗಿರುವ ಹಾನಿ ಸರಿಪಡಿಸುವುದಕ್ಕೆ ಎರಡು ವರ್ಷಗಳು ಬೇಕು’ ಎಂದರು.

‘ನಾನೂ ತಿನ್ನುವುದಿಲ್ಲ– ಬೇರೆಯವರು ತಿನ್ನಲೂ ಬಿಡುವುದಿಲ್ಲ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಘೋಷಣೆ. ರಾಜ್ಯದಲ್ಲಿ ಕಾಮಗಾರಿಯ ಅನುದಾನವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಲು ಶೇ 40 ರಷ್ಟು ಲಂಚ ಪಡೆಯಲಾಗುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರ ಸಂಘದವರು 2021ರ ಜುಲೈನಲ್ಲೇ ಪ್ರಧಾನಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಪ್ರಧಾನಿ ಕಚೇರಿ ಪ್ರತಿಕ್ರಿಯೆಯನ್ನೇ ನೀಡಿಲ್ಲ. ಕೊಲ್ಕತ್ತ, ನವದೆಹಲಿಗಳಲ್ಲಿ ಬಿಜೆಪಿಯೇತರ ಸರ್ಕಾರಗಳಿರುವಲ್ಲಿ ಆದಾಯ ತೆರಿಗೆ, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾಜಕಾರಣಗಳ ಮನೆ ಮೇಲೆ ಯಾವ ರೀತಿ ದಾಳಿ ನಡೆಸಿದ್ದಾರೆ ಎಂಬುದನ್ನು ನೊಡಿದ್ದೇವೆ. ಆದರೆ, ರಾಜ್ಯದಲ್ಲಿ ಸಚಿವರು ಅನುದಾನದಲ್ಲಿ ಭರಪೂರ ಶೇ 40ರಷ್ಟನ್ನು ನುಂಗುತ್ತಿದ್ದರೂ ಒಂದೇ ಒಂದು ದಾಳಿ ನಡೆಯುವುದಿಲ್ಲ. ಇದರ ಮರ್ಮವೇನು’ ಎಂದು ಅವರು ಪ‍್ರಶ್ನಿಸಿದರು.

‘ಸರ್ಕಾರದ ವಿರುದ್ಧ ಜನಾಭಿಪ್ರಾಯ ಇದೆ. ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಬಿಜೆಪಿಯ ವೈಫಲ್ಯ ಹಾಗೂ ಕಾಂಗ್ರೆಸ್‌ ಸರ್ಕಾರದ ಸಾಧನೆಗಳನ್ನು ಮನೆಗೆ ಮನೆಗೆ ತಲುಪಿಸಬೇಕು. ವಿಧಾನಸಭಾ ಚುನಾವಣೆಗೆ ಇನ್ನೂ ಏಳೆಂಟು ತಿಂಗಳುಗಳಷ್ಟೇ ಇವೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ 150ಕ್ಕೂ ಅಧಿಕ ಸ್ಥಾನಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲ 13 ಸ್ಥಾನಗಳಲ್ಲೂ ಕಾಂಗ್ರೆಸ್‌ ಗೆಲ್ಲಲಿದೆ. ನಾಯಕರು ಹಾಗೂ ಕಾರ್ಯಕರ್ತರು ಶ್ರಮ ವಹಿಸಿದರೆ ಇದು ಕಷ್ಟವೇನಲ್ಲ’ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್, ಶಾಸಕ ಮಂಜುನಾಥ ಭಂಡಾರಿ, ಪಕ್ಷದ ಮುಖಂಡರಾದ ಅಭಯಚಂದ್ರ ಜೈನ್, ಗಂಗಾಧರ್ ಗೌಡ, ಶಕುಂತಲಾ ಶೆಟ್ಟಿ, ಜೆ.ಆರ್.ಲೋಬೊ, ಮೊಯ್ದೀನ್ ಬಾವ, ಮಿಥುನ್ ರೈ, ಇಬ್ರಾಹಿಂ ಕೋಡಿಜಾಲ್, ಡಾ.ರಘು ಸುಳ್ಯ, ಸುರೇಶ್ ಬಳ್ಳಾಲ್, ಇನಾಯತ್ ಅಲಿ, ಕೃಪಾ ಆಳ್ವ, ಕವಿತಾ ಸನಿಲ್, ರಾಜಶೇಖರ್ ಕೋಟ್ಯಾನ್, ಲುಕ್ಮಾನ್ ಬಂಟ್ವಾಳ್, ಶಾಲೆಟ್ ಪಿಂಟೊ, ಜೋಕಿಂ ಡಿಸೋಜಾ, ಸವಾದ್ ಸುಳ್ಯ, ಶಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ನಾರಾಯಣ ನಾಯ್ಕ್, ಲಾರೆನ್ಸ್ ಡಿಸೋಜಾ, ಶುಭಾಶ್ ಕೊಲ್ನಾಡು, ಡಾ.ಶೇಖರ್ ಪೂಜಾರಿ, ಸುದರ್ಶನ್ ಜೈನ್, ಬಿ.ಎಂ.ಅಬ್ಬಾಸ್ ಅಲಿ, ಮೋಹನ್ ಗೌಡ, ಸಚಿನ್ ರಾಜ್, ನಜೀರ್ ಬಜಾಲ್ ಇದ್ದರು.

ಮಮತಾ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ಐವನ್ ಡಿಸೋಜಾ ವಂದಿಸಿದರು.

****

ಮುಂದಿನದು ನನಗೆ ಕೊನೆಯ ಚುನಾವಣೆ: ರೈ

‘ನನಗೀಗ 75 ವರ್ಷ. ಮುಂಬರುವ ವಿಧಾನಸಭಾ ಚುನಾವಣೆ ನನ್ನ ಬದುಕಿನ ಕೊನೆಯ ಚುನಾವಣೆ’ ಎಂದು ಪಕ್ಷದ ಮುಖಂಡ ರಮಾನಾಥ ರೈ ಪ್ರಕಟಿಸಿದರು.

‘ಜಿಲ್ಲೆಯಲ್ಲಿ ಪಕ್ಷಕ್ಕೆ ಈಗಲೂ ಕಾಂಗ್ರೆಸ್‌ಗೆ ಭದ್ರ ನೆಲೆ ಇದೆ. ಇಡೀ ದೇಶದಲ್ಲಿ ಕಾಂಗ್ರೆಸ್‌ ಸೋತಿದ್ದಾಗ ಇಂದಿರಾ ಗಾಂಧಿ ಅವರನ್ನು ಗೆಲ್ಲಿಸುವ ಮೂಲಕ ಪಕ್ಷಕ್ಕೆ ಮರುಜೀವ ನೀಡಿದ್ದ ಜಿಲ್ಲೆ ನಮ್ಮದು. ಈ ಇತಿಹಾಸ ಈ ಸಲ ಮರುಕಳಿಸಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಮುಂಬರುವ ವಿಧಾನ ಸಭಾ ಚುನಾವಣೆ ಪಕ್ಷದ ಅಳಿವು ಉಳಿವಿನ ಪ್ರಶ್ನೆ ಎಂದು ಸವಾಲಾಗಿ ಸ್ವೀಕರಿಸಿ ನಾಯಕರು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿ ದುಡಿಯಬೇಕು. ಬಸವಣ್ಣ ಹಾಗೂ ನಾರಾಯಣ ಗುರುಗಳ ಸಂದೇಶಗಳೇ ನಮ್ಮ ಪಕ್ಷದ ತತ್ವ. ಕಾಂಗ್ರೆಸ್‌ ಗೆದ್ದರೆ ಸಾಮರಸ್ಯ ಬಲಗೊಳ್ಳುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಬಹುತ್ವ ಸಂಸ್ಕೃತಿಯ ದೇಶದಲ್ಲಿರುವ ಏಕೈಕ ಜಾತ್ಯತೀತ ಪಕ್ಷ ನಮ್ಮದು. ಜಾತ್ಯತೀತ ಎಂದು ಹೆಸರಿಟ್ಟುಕೊಂಡದುರ್ಬಲ ಪಕ್ಷಗಳಿಂದಾಗಿ ಜಾತ್ಯತೀತತೆಯೇ ದುರ್ಬಲಗೊಂಡಿದೆ. ಜಿಲ್ಲೆಯಲ್ಲಿ ಧರ್ಮಾಧಾರಿತವಾಗಿ ನಡೆದ ಹಿಂದೂ ಹಾಗೂ ಮುಸ್ಲಿಮರ ಕೊಲೆಗಳಲ್ಲಿ ನಮ್ಮ ಪಕ್ಷದ ಒಬ್ಬನೇ ಒಬ್ಬ ಆರೋಪಿ ಇಲ್ಲ ಎಂದು ಗರ್ವದಿಂದ ಹೇಳಿಕೊಳ್ಳುತ್ತೇನೆ’ ಎಂದರು.

*****

ಹತ್ಯೆಯಲ್ಲೂ ಲಾಭ ಪಡೆಯಲು ಹವಣಿಸುವ ಬಿಜೆಪಿ: ಸೊರಕೆ

‘ಈ ಸಲ ಕಾಂಗ್ರೆಸ್‌ ಗೆಲ್ಲುತ್ತದೆ ಎಂಬಂತೆ ಬಿಂಬಿಸಿ ನಾವು ಮೈಮರೆಯುವಂತೆ ವಿರೋಧ ಪಕ್ಷದವರು ತಂತ್ರ ಮಾಡುತ್ತಾರೆ. ಅದರಿಂದ ವಿಚಲಿತರಾಗಬಾರದು. ಬಿಜೆಪಿಯವರು ಪ್ರತಿ 10 ಮನೆಗೆ ಒಬ್ಬರು ಪೇಜ್‌ ಪ್ರಮುಖ್‌ ಕಾರ್ಯಕರ್ತರನ್ನು ನೇಮಿಸಿದ್ದಾರೆ. ನಾವು ನಮ್ಮ ಪಕ್ಷವನ್ನು ಬೂತ್‌ಮಟ್ಟದಲ್ಲಿ ಕಟ್ಟಿದರೆ ಸಾಲದು. ಕುಟುಂಬ ಸಮ್ಮಿಲನದಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಇನ್ನಷ್ಟು ತಳಮಟ್ಟವನ್ನು ತಲುಪಬೇಕು’ ಎಂದು ಪಕ್ಷದ ಮುಖಂಡ ವಿನಯ ಕುಮಾರ್‌ ಸೊರಕೆ ಸಲಹೆ ನೀಡಿದರು.

‘ಧರ್ಮಾಧಾರಿತ ಹತ್ಯೆಗಳಿಂದ ತಮಗೆ ಪ್ರಯೋಜನವಾಗುತ್ತದೆ ಎಂದು ಬಿಜೆಪಿ ನಾಯಕರು ಭಾವಿಸಿದ್ದರು. ಪ್ರವೀಣ್‌ ನೆಟ್ಟಾರು ಹತ್ಯೆಯಾದಾಗ ಸಂಸದ ನಳಿನ್‌ ಕುಮಾರ್‌ ಅವರನ್ನು ಅವರ ಪಕ್ಷದ ಕಾರ್ಯಕರ್ತರೇ ಅಟ್ಟಾಡಿಸಿದ್ದ ದೃಶ್ಯವನ್ನು ನೊಡಿದ್ದೇವೆ. ಸುನಿಲ್ ಕುಮಾರ್‌ ಮೇಜಿನ ಕೆಳಗೆ ಅವಿತಿದ್ದನ್ನು ನೋಡಿದ್ದೇವೆ. ಕಲ್ಲಡ್ಕ ಪ್ರಭಾಕರ ಭಟ್ಟ ಕಾಲರ್‌ ಅನ್ನು ಅವರ ಬೆಂಬಲಿಗರೇ ಹಿಡಿದಿದ್ದನ್ನು ನೋಡಿದ್ದೇವೆ. ಪಕ್ಷಕ್ಕಾಗಿರುವ ಹಾನಿ ಸರಿಪಡಿಸಲು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಜೆಪಿಯವರು ಕರೆಸಿದರು. ಅದಾನಿಗೆ ಮಾರಾಟ ಆಗಿರುವ ಮಂಗಳೂರು ಬಂದರಿನಲ್ಲಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಆ ಕಾರ್ಯಕ್ರಮಕ್ಕೂ ಜನ ಸೇರುವುದಿಲ್ಲ ಎಂದು ಖಚಿತವಾದಾಗ, ಜಿಲ್ಲೆಯ ಎಲ್ಲ ಆಶಾ ಕಾರ್ಯಕರ್ತೆಯರು, ಫಲಾನುಭವಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ಫರ್ಮಾನು ಹೊರಡಿಸಿದರು. ಈ ಕಾರ್ಯಕ್ರಮಕ್ಕೆ ಬನ್ನಿ ಎಂದು ನಾಟಕದವರಿಂದಲೂ ಹೇಳಿಸಿದರು. ಆದರೂ ಜನ ಬರಲಿಲ್ಲ. ಆ ಕಾರ್ಯಕ್ರಮದಲ್ಲಿ ಪ್ರಧಾನಿ ಅವರ ಭಾಷಣ ಎಷ್ಟು ನೀರಸವಾಗಿತ್ತು ಎಂದರೆ, ಕಾಪು ಕ್ಷೇತ್ರದ ಶಾಸಕ ಲಾಲಾಜಿ ಮೆಂಡನ್‌ ಅವರು ಕಾರ್ಯಕ್ರಮದಲ್ಲಿ ನಿದ್ದೆ ಹೋದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ’ ಎಂದು ಸೊರಕೆ ತಿಳಿಸಿದರು.

‘ಪ್ರಧಾನಿಯವರು ಭಾಗವಹಿಸಿದ್ದು ಸರ್ಕಾರಿ ಕಾರ್ಯಕ್ರಮದಲ್ಲಿ. ಆದರೂ ಅದರಲ್ಲಿ ರಾಷ್ಟ್ರಗೀತೆಯನ್ನು ಹಾಡಿಲ್ಲ. ಈ ಮೂಲಕ ರಾಷ್ಟ್ರ ಗೀತೆಗೂ ಅವಮಾನ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಂಗಳೂರು ಬಂದರಿನ ನಿರ್ಮಾತೃ ಶ್ರೀನಿವಾಸ ಮಲ್ಯ ಅವರ ಹೆಸರನ್ನೂ ಸ್ಮರಿಸದೆ ಅವರಿಗೂ ಅವಮಾನ ಮಾಡಿದ್ದಾರೆ ’ ಎಂದು ಸೊರಕೆ ಆರೋಪಿಸಿದರು.

****

ಪ್ರಧಾನಿ ನರೇಂದ್ರ ಮೋದಿಯವರುವಿದೇಶಗಳಲ್ಲಿ ಮಹಾತ್ಮ ಗಾಂಧೀಜಿಯ ಜಪ‍ ಮಾಡುತ್ತಾರೆ. ಇನ್ನೊಂದೆಡೆ ಅವರ ಶಿಷ್ಯಂದಿರು ಗಾಂಧಿಯನ್ನು ಕೊಂದ ಗೋಡ್ಸೆಗೆ ಜೈಕಾರ ಹಾಕುತ್ತಾರೆ
-ಬಿ.ರಮಾನಾಥ ರೈ, ಕಾಂಗ್ರೆಸ್‌ ಮುಖಂಡ

****

ಮೂರು ವರ್ಷಗಳಲ್ಲಿ ಒಬ್ಬ ಫಲಾನುಭವಿಗೂ ಒಂದೇ ಒಂದು ಮನೆ ಮಂಜೂರಾಗಿಲ್ಲ, ಒಬ್ಬರಿಗೂ ಹಕ್ಕುಪತ್ರ ನೀಡಿಲ್ಲ. ಇದು ಬಿಜೆಪಿಯ ಜನಪರ ಆಡಳಿತದ ವೈಖರಿ
-ಯು.ಟಿ.ಖಾದರ್‌, ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT