ಬೆಂಗಳೂರು: ‘ದಲಿತರ, ಅಲ್ಪಸಂಖ್ಯಾತರ ಹಾಗೂ ಮಹಿಳೆಯರ ಬದುಕಿನ ಸುರಕ್ಷತೆಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸದಂತೆ ನೋಡಿಕೊಳ್ಳಬೇಕು’ ಎಂದು ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್ ಹೇಳಿದರು.
ದಲಿತ ಮುಖಂಡಲಕ್ಷ್ಮಿನಾರಾಯಣ ನಾಗವಾರ ಸ್ನೇಹ ಬಳಗವು ನಗರದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಪ್ರೀತಿಯ ಹೊನಲು ಲಕ್ಷ್ಮಿನಾರಾಯಣ ನಾಗವಾರ’ ಎಂಬ ಕೃತಿ ಸಹ ಬಿಡುಗಡೆ ಮಾಡಲಾಯಿತು.
‘ಜನಸಾಮಾನ್ಯರನ್ನು ಕೊಂದು ಅವರ ಎಲುಬುಗಳನ್ನೇ ಏಣಿಯಾಗಿಸಿಕೊಂಡು ಅಧಿಕಾರಕ್ಕೇರುವ ಚಾಳಿ ಬಿಜೆಪಿ ನಾಯಕರದ್ದು. ಅಧಿಕಾರಕ್ಕಾಗಿ ಜನಸಾಮಾನ್ಯರ ರಕ್ತವನ್ನು ಹೀರಬಲ್ಲರು. ಅಂಥವರು ಈ ದೇಶವನ್ನು ಮುನ್ನೆಡೆಸಲು ಯೋಗ್ಯರೇ ಎಂಬುದನ್ನು ಜನರಿಗೆ ತಿಳಿಸುವ ಕಾಲ ಬಂದಿದೆ’ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ‘ಬ್ರಾಹ್ಮಣಶಾಹಿಗಳು ಮೊಘಲರ ಹಾಗೂ ಬ್ರಿಟಿಷರ ಬೂಟು ನೆಕ್ಕಿ ಸಂಪತ್ತು ಅನುಭವಿಸಿದರು. ಆದರೆ, ಸ್ವಾತಂತ್ರ್ಯ ನಂತರದ ಭಾರತದಲ್ಲಿ ದೇಶಭಕ್ತಿಯ ನಾಟಕವಾಡುತ್ತಿದ್ದಾರೆ’ ಎಂದರು.