ಈ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ, ‘ದುಬೈ ಶರೀಫ್ ಎಂಬ ಚಿನ್ನ ಕಳ್ಳಸಾಗಣೆದಾರನ ₹ 12 ಕೋಟಿ ಮೌಲ್ಯದ ಚಿನ್ನವನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಪ್ರಕರಣ ದಾಖಲಿಸದೇ ಚಿನ್ನವನ್ನು ಬಿಡಿಸಿಕೊಡಲು ಶರೀಫ್ ಬೆಂಗಳೂರಿನ ಮುಜಾಫರ್ ಎಂಬ ವಕೀಲನ ಸಲಹೆಯಂತೆ ಮಂಗಳೂರಿನ ಗಿರೀಶ್ ರೈ ಮತ್ತು ಇಮ್ತಿಯಾಝ್ ಎಂಬುವವರಿಗೆ ನೀಡಿದ್ದ. ಆದರೆ, ಅವರಿಂದ ಆ ಕೆಲಸ ಸಾಧ್ಯವಾಗಿರಲಿಲ್ಲ. ಅವರಿಗೆ ನೀಡಿದ್ದ ಹಣವನ್ನು ವಸೂಲಿ ಮಾಡಲು ಸ್ಯಾಮ್ ಪೀಟರ್ನನ್ನು ನಿಯೋಜಿಸಲಾಗಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ’ ಎಂದರು.