ಮೂಡುಬಿದಿರೆ: ಉತ್ತಮ ಆರೋಗ್ಯಕ್ಕಾಗಿ ಜೀವನದಲ್ಲಿ ಪಂಚಸೂತ್ರವನ್ನು ಪಾಲಿಸಬೇಕು ಎಂದು ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲ ಹೇಳಿದರು.
ತಾಲ್ಲೂಕಿನ ಮರಿಯಾಡಿ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಡೆಂಗಿ ನಿರ್ಮೂಲನಾ ಸಪ್ತಾಹದ ಅಂಗವಾಗಿ ನಡೆದ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪೌಷ್ಟಿಕ ಆಹಾರ,ಶುದ್ಧ ನೀರು, ಮಾಲಿನ್ಯ ರಹಿತ ಪರಿಸರ, ಆರೋಗ್ಯಕರ ಹವ್ಯಾಸ, ವೈಯಕ್ತಿಕ ಸ್ವಚ್ಛತೆಯು ಬದುಕಿನಲ್ಲಿ ಅನುಸರಿಸಬೇಕಾದ ಪಂಚಸೂತ್ರಗಳು’ ಎಂದ ಅವರು, ‘ನಾವು ನಿರ್ಲಕ್ಷ್ಯ ವಹಿಸಿದರೆ, ಮೂರು ತಿಂಗಳು ಬದುಕುವ ಸೊಳ್ಳೆಗಳು ನೂರು ವರ್ಷ ಬದುಕುವ ಮನುಷ್ಯರನ್ನು ಸಾಯಿಸಬಲ್ಲವು’ ಎಂದು ಎಚ್ಚರಿಸಿದರು.
ಮೂಡುಬಿದಿರೆ ಪುರಸಭೆ ಸದಸ್ಯೆ ಮಮತಾ ಆನಂದ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಭಾಸ್ಕರ ಪಾಲ್ತಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು.