ಮೂಡುಬಿದಿರೆ: ‘ಹದಿಹರೆಯದಲ್ಲಿ ವ್ಯವಸ್ಥೆಯ ವಿರುದ್ಧ ಅಸಹನೆ, ಅಕ್ರೋಶ, ಸವಾಲು ಸಾಮಾನ್ಯವಾಗಿದ್ದು, ಇಂಥ ಸಿಟ್ಟನ್ನು ಧನಾತ್ಮಕ ಉದ್ದೇಶಗಳಿಗೆ ವಿನಿಯೋಗಿಸುವುದರ ಮೂಲಕ ಜೀವನದಲ್ಲಿ ಸಾರ್ಥಕ್ಯವನ್ನು ಕಾಣಬಹುದು’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರೆ ಶಾಜಿಯಾಇಲ್ಮಿ ಹೇಳಿದರು.
ಇಲ್ಲಿನ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತನ್ನ ಏಳಿಗೆಯನ್ನಷ್ಟೇ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಿದರೆ ಸವಾಲುಗಳು ಎದುರಾದಾಗ ಎದೆಗುಂದುತ್ತೇವೆ. ಉಳಿದವರ ಹಿತದಲ್ಲಿ ನಮ್ಮ ಹಿತ ಅಡಗಿರುತ್ತದೋ ಆಗ ಸವಾಲುಗಳನ್ನು ಮೀರಿ ಮುನ್ನಡೆಯಲು ಸಾಧ್ಯವಾಗುತ್ತದೆ. ನಮ್ಮ ಬಾಹ್ಯ ಪ್ರಪಂಚಕ್ಕಿಂತ ನಮ್ಮ ಆಂತರಿಕ ಪ್ರಪಂಚ ಮುಖ್ಯವಾಗುತ್ತದೆ’ ಎಂದರು.
ವೃತ್ತಿಯನ್ನು ನಾವು ಪ್ರೀತಿಸಿದಾಗ ಮಾತ್ರ ನಮ್ಮ ಬದುಕು ಹಸನಾಗುತ್ತದೆ. ಯಾವ ಕೆಲಸ ನಮಗೆ ಹಣಕ್ಕಿಂತ ನೆಮ್ಮದಿ ತಂದುಕೊಡುತ್ತದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ, ಧೃಢ ಸಂಕಲ್ಪ, ಛಲ ಇದ್ದರೆ ಯಶಸ್ಸು ಗಳಿಸಲು ಸಾಧ್ಯ ಎಂದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಶೈಕ್ಷಣಿಕ ನಿರ್ದೇಶಕ ಡಾ.ಬಿ.ಪಿ.ಸಂಪತ್ಕುಮಾರ್, ಪ್ರಾಂಶುಪಾಲ ಪ್ರದೀಪ್ಕುಮಾರ್ ಶೆಟ್ಟಿ ಇದ್ದರು. ವಿಕ್ರಮ್ ನಾಯಕ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.