ಕಡಬ: ಯುವತಿಯ ಫೇಸ್ಬುಕ್ ಖಾತೆಯನ್ನು ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಕಡಬದ ಯುವಕನನ್ನು ಪಶ್ಚಿಮ ಬಂಗಾಳದ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಪಶ್ಚಿಮ ಬಂಗಾಳದ ಯುವತಿಗೆ ಸಂಬಂಧಿಸಿದ ಖಾತೆಯನ್ನು ಕಡಬ ತಾಲ್ಲೂಕಿನ ನೂಜಿಬಾಳ್ತಿಲದ ಬಳ್ಳೇರಿ ನಿವಾಸಿ ಸಂಜಯ್ ಕೃಷ್ಣ ಎಂಬಾತ ದುರುಪಯೋಗ ಪಡಿಸಿಕೊಂಡ ಬಗ್ಗೆ ಯುವತಿಯು ಪಶ್ಚಿಮ ಬಂಗಾಳದಲ್ಲಿ ದೂರು ದಾಖಲಿಸಿದ್ದರು.
ಪಶ್ಚಿಮ ಬಂಗಾಳ ಪೊಲೀಸರು ಕಡಬ ಪೊಲೀಸರ ಸಹಾಯದಿಂದ ಸಂಜಯ್ ಕೃಷ್ಣನನ್ನು ಬಂಧಿಸಿ, ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು, ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯಲಾಗಿದೆ.