ಮಂಗಳೂರು: ಕರಾವಳಿಯ ಉದ್ಯಮಿಗಳು, ವ್ಯಾಪಾರಿಗಳು ಇಲ್ಲಿನ ಮೂಲಸೌಕರ್ಯಗಳಾದ ಎನ್ಎಂಪಿಟಿ, ಮಂಗಳೂರು ವಿಮಾನ ನಿಲ್ದಾಣದಂತಹ ಸೌಲಭ್ಯಗಳ ಸಮರ್ಪಕ ಬಳಕೆ ಮಾಡಿಕೊಂಡು, ಈ ಭಾಗದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಹೇಳಿದರು.
ಕೆನರಾ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ನಗರದ ಹೋಟೆಲ್ ಓಷಿಯನ್ ಪರ್ಲ್ನಲ್ಲಿ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
ನಗರದಲ್ಲಿ ಐಟಿ ಪಾರ್ಕ್ ಆರಂಭಿಸುವ ನಿಟ್ಟಿನಲ್ಲಿ ಕೆನರಾ ವಾಣಿಜ್ಯೋದ್ಯಮ ಸಂಸ್ಥೆ ವಹಿಸಿರುವ ಶ್ರಮ ಶ್ಲಾಘನೀಯ. ಮಂಗಳೂರು ಸೇರಿದಂತೆ ಕಾರವಾರದವರೆಗೆ ಕರಾವಳಿಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.
ಕೆನರಾ ವಾಣಿಜ್ಯೋದ್ಯಮ ಸಂಸ್ಥೆ, ಈ ಭಾಗದ ಹಾಗೂ ದೇಶದ ಅಭಿವೃದ್ಧಿಗೆ ಮಾದರಿ ವ್ಯಕ್ತಿಗಳನ್ನು ರೂಪಿಸಬೇಕು ಎಂದರು.
1920 ರಲ್ಲಿ ಕಂಡುಬಂದ ಸಾಂಕ್ರಾಮಿಕದಿಂದ ಜನರ ಜೀವನದಲ್ಲಿ ಅಮೂಲಾಗ್ರ ಬದಲಾವಣೆ ಆಯಿತು. ಅದೇ ರೀತಿ ಸದ್ಯದ ಕೋವಿಡ್–19 ಪಿಡುಗಿನಿಂದ ಸ್ವಚ್ಛತೆ ಸೇರಿದಂತೆ ಸಾಕಷ್ಟು ಕಲಿತಿದ್ದು, ಇಂತಹ ಧನಾತ್ಮಕ ಅಂಶಗಳನ್ನು ಬಳಸಿಕೊಂಡು, ವಹಿವಾಟಿನ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.
ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್, ಎಫ್ಕೆಸಿಸಿಐನ ಅಂತರರಾಷ್ಟ್ರೀಯ ವ್ಯವಹಾರದ ಅಧ್ಯಕ್ಷ ಡಾ.ವಿ.ಜಿ. ಕಿರಣ್ಕುಮಾರ್ ವೇದಿಕೆಯಲ್ಲಿದ್ದರು. ಕೆಸಿಸಿಐ ಉಪಾಧ್ಯಕ್ಷ ಶಶಿಧರ್ ಪೈ ಮಾರೂರು ಸ್ವಾಗತಿಸಿದರು. ಕೋಶಾಧಿಕಾರಿ ಗಣೇಶ್ ಕಾಮತ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.