ಮಂಗಳೂರು: ‘ಇಫ್ತಾರ್ ಮುಸ್ಸಂಜೆ’ ಕಾರ್ಯಕ್ರಮದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು, ಜೈನರು ಜೊತೆಗೂಡಿ ಧರ್ಮ ಸಮನ್ವಯಕ್ಕೆ ಸಾಕ್ಷಿಯಾದರು.
ಸಾಮಾಜಿಕ ಹೋರಾಟಗಾರ ದಿನೇಶ್ ಹೆಗ್ಡೆ ಉಳೆಪಾಡಿ ನೇತೃತ್ವದ ಸಹಕಾರ ನ್ಯಾಯ ಕೂಟದ ವತಿಯಿಂದ ಶಾಂತಿ ಸಮಾನತೆಗಾಗಿ ಈ ಕಾರ್ಯಕ್ರಮವು ಶುಕ್ರವಾರ ನಗರದ ಬಲ್ಮಠ ಸಹೋದಯ ಸಭಾಂಗಣದ ಹತ್ತಿರದ ಹೆಬಿಕ್ ತಾಂತ್ರಿಕ ತರಬೇತಿ ಸಂಸ್ಥೆಯ ಆವರಣದ ಆಲದ ಮರದಡಿಯಲ್ಲಿ ವಿಶಿಷ್ಟವಾಗಿ ನಡೆಯಿತು.
ಗೋಪಾಡ್ಕರ್ ಕಲ್ಪನೆಯ ವೇದಿಕೆಯಲ್ಲೇ ಮಗ್ರಿಬ್ ಬಾಂಗ್ ಕರೆ ಕೊಡಲಾಯಿತು. ಉಪವಾಸ ಮಾಡಿದವರು ವ್ರತ ತೊರೆದರೆ, ಇತರರು ಭಾಗಿಗಳಾದರು. ನಾದಮಣಿ ನಾಲ್ಕೂರು ಭಾವೈಕ್ಯ ಸಾರುವ ಕತ್ತಲ ಹಾಡುಗಳನ್ನು ಹಾಡಿದರು.
ಇಸ್ಲಾಂ ಧರ್ಮದ ಬಗ್ಗೆ ಕೆಲವರಿಗೆ ಅಪನಂಬಿಕೆ ಇದೆ. ಮುಸ್ಲಿಮರ ಬಗ್ಗೆಯೂ ಅಸಹಿಷ್ಣುತೆ ಇದೆ. ಪರಸ್ಪರ ಅರ್ಥ ಮಾಡಿಕೊಂಡರೆ ಇಂತಹ ಅಪನಂಬಿಕೆ ದೂರವಾಗಬಹುದು ಎಂದುಸುನ್ನಿ ಯುವಜನ ಸಂಘದ ರಾಜ್ಯಾಧ್ಯಕ್ಷ ಡಾ.ಎಂ.ಎಸ್.ಎಂ. ಝೈನಿ ಕಾಮಿಲ್ ಹೇಳಿದರು.
ಸಮಾನತೆ, ಸರಳತೆ ದೇಶದ ಭವ್ಯ ಸಂಸ್ಕೃತಿಯಾಗಿದೆ ಎಂಬುದನ್ನು ಅರ್ಥ ಮಾಡಿಕೊಂಡು ಹಿಂದಿಗಿಂತಲೂ ಈಗ ಸಮನ್ವಯತೆಯ ಅಗತ್ಯವನ್ನು ಮನಗಂಡು ಸೌಹಾರ್ದದ ಬದುಕು ಕಟ್ಟುವ ಕೆಲಸಕ್ಕೆ ಮುಂದಾಗಬೇಕಿದೆ ಎಂದುರಾಮಕೃಷ್ಣ ಮಿಷನ್ ಮಂಗಳೂರಿನ ಸಂಯೋಜಕ ರಂಜನ್ ಬೆಳ್ಳರ್ಪಾಡಿ ತಿಳಿಸಿದರು.
ಪರಸ್ಪರ ಧರ್ಮಗಳನ್ನು ಗೌರವಿಸಿ ಸಮಾಜದಲ್ಲಿ ಭಾವೈಕ್ಯ ಬೆಸೆಯುವುದು ಎಲ್ಲರ ಕರ್ತವ್ಯವಾಗಿದೆ ಎಂದುಸಿಎಸ್ಐ ಶಾಂತಿ ಕೆಥೆಡ್ರಲ್ ಸಭಾಪಾಲಕರಾದರೆ. ಎಂ. ಪ್ರಭುರಾಜ್ ಹೇಳಿದರು. ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಇದ್ದರು.