ಉಳ್ಳಾಲ: ತಾಲ್ಲೂಕು ಆಡಳಿತ, ಉಳ್ಳಾಲ ನಗರಸಭೆ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಆಶ್ರಯದಲ್ಲಿ ತಾಲ್ಲೂಕು ಮಟ್ಟದ ಸ್ವಾತಂತ್ರ್ಯೋತ್ಸವ ದಿನಾಚರಣೆ ಉಳ್ಳಾಲ ಅಬ್ಬಕ್ಕ ಸರ್ಕಲ್ನಲ್ಲಿರುವ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಉಳ್ಳಾಲ ತಹಶೀಲ್ದಾರ್ ಪ್ರಭಾಕರ್ ಕಾಜೂರೆ ಧ್ವಜಾರೋಹಣ ನೆರವೇರಿಸಿದರು.
ಉಳ್ಳಾಲ ತಾಲ್ಲೂಕು ಆಡಳಿತ ಸೌಧ ಹಾಗೂ ತಾಲ್ಲೂಕು ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಕೊಣಾಜೆ ಗ್ರಾಮದಲ್ಲಿ ಜಮೀನು ಕಾಯ್ದಿರಿಸಲಾಗಿದ್ದು, ನಿರ್ಮಾಣದ ಬಗ್ಗೆ ರೂಪುರೇಷೆ ತಯಾರಿಸಲಾಗಿದೆ. ಈ ಬಾರಿ ಉಳ್ಳಾಲ ತಾಲೂಕಿನಲ್ಲಿ ಹಾನಿಗೀಡಾದ 77 ಮನೆಗಳ ಕುಟುಂಬದವರಿಗೆ ಪರಿಹಾರ ವಿತರಿಸಲಾಗಿದೆ. ನೀರಿನಲ್ಲಿ ಮುಳುಗಿ ಮೃತಪಟ್ಟ 2 ಕುಟುಂಬಗಳಿಗೆ ತಲಾ ₹ 5 ಲಕ್ಷದಂತೆ ಪರಿಹಾರ ವಿತರಿಸಲಾಗಿದೆ. ಗೃಹಲಕ್ಷ್ಮೀ ಯೋಜನೆಗೆ 20,061 ಅರ್ಜಿ ಸ್ವೀಕೃತಗೊಂಡಿದೆ ಎಂದರು.
ತಾಲ್ಲೂಕಿನಲ್ಲಿ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ಅಂಗವಿಕಲ ಯೋಜನೆ, ವಿಧವಾ ವೇತನ, ಮನಸ್ವಿನಿ ಯೋಜನೆಯಲ್ಲಿ ಒಟ್ಟು 23,930 ಫಲಾನುಭವಿಗಳಿದ್ದು, ಸುಮಾರು 8400 ಹಕ್ಕು ಪತ್ರ ವಿತರಿಸಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಎಚ್.ಆರ್., ಉಳ್ಳಾಲ ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್ ಉಪಸ್ಥಿತರಿದ್ದರು.
ಉಳ್ಳಾಲ ನಗರಸಭೆ ಪೌರಾಯುಕ್ತೆ ವಾಣಿ ವಿ.ಆಳ್ವ ಸ್ವಾಗತಿಸಿದರು. ಉಳ್ಳಾಲ ನಗರಸಭೆ ಕಂದಾಯ ಅಧಿಕಾರಿ ನವೀನ್ ಹೆಗಡೆ ಪ್ರತಿಜ್ಞಾ ವಿದಿ ಬೋಧಿಸಿದರು. ಉಳ್ಳಾಲ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀಣಾ ಶಾಂತಿ ಡಿಸೋಜಾ ಅವರು ಯೋಧರನ್ನು ಸನ್ಮಾನಿಸಿದರು. ನಮ್ಮ ಮಣ್ಣು, ನಮ್ಮ ಭೂಮಿ ಸರ್ಕಾರದ ಕಾರ್ಯಕ್ರಮದಡಿ ಸಾರ್ವಜನಿಕರಿಂದ ಮಣ್ಣು ಸಂಗ್ರಹ ಕಾರ್ಯಕ್ರಮವನ್ನು ಸಮುದಾಯದ ಸಂಘಟಕ ರೋಹಿನಾಥ್ ನಡೆಸಿಕೊಟ್ಟರು.
ಅಬ್ಬಕ್ಕ ವೃತ್ತದಿಂದ ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್ನ ಧ್ವಜಸ್ಥಂಭದವರೆಗೆ ತಿರಂಗಾ ಮೆರವಣಿಗೆ ನಡೆಯಿತು.
ನಿವೃತ್ತ ಯೋಧರಾದ ಪ್ರಭಾಕರ್ ಹಾಗೂ ಯು.ಐತಪ್ಪ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು.
ಮೇರಿ ಮಾಟಿ ಮೇರಿ ದೇಶ್ ಸಂದೇಶದಡಿ ದೇಶರಕ್ಷಣೆಯ ಪ್ರತಿಜ್ಞಾ ವಿಧಿಯನ್ನು ಕಂದಾಯ ಅಧಿಕಾರಿ ನವೀನ್ ಹೆಗ್ಡೆ ಬೋಧಿಸಿದರು. ಓವರ್ ಬ್ರಿಡ್ಜ್ ಬಳಿ ಉಳ್ಳಾಲ ತಾಲ್ಲೂಕು ವ್ಯಾಪ್ತಿಯ ನಿವೃತ್ತ ಯೋಧರ ಹೆಸರಿರುವ ಶಿಲಾಫಲಕವನ್ನು ತಹಶೀಲ್ದಾರ್ ಉದ್ಘಾಟಿಸಿದರು.
ಸೈಯ್ಯದ್ ಮದನಿ ಶಾಲಾ ಮುಖ್ಯ ಶಿಕ್ಷಕ ಕೆ.ಎಂ.ಕೆ.ಮಂಜನಾಡಿ ಕಾರ್ಯಕ್ರಮ ನಿರ್ವಹಿಸಿದರು. ನಾಡಗೀತೆಯನ್ನು ಸೈಯ್ಯದ್ ಮದನಿ ಶಾಲೆ ಹಳೆಕೋಟೆ ಇಲ್ಲಿನ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಸಂತ ಸೆಬಾಸ್ಟಿಯನ್ನರ ಶಾಲೆ ತೊಕ್ಕೊಟ್ಟು ಇಲ್ಲಿನ ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ಹಾಡಿದರು. ಉಪಾಧ್ಯಕ್ಷ ಆಯ್ಯೂಬ್ ಮಂಚಿಲ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.