ಮೂಲ್ಕಿ: ‘ಸ್ವಾತಂತ್ರ್ಯ ಬಂದ ನಂತರ ಹಿಂದೂ ಧರ್ಮವು ಶೋಷಣೆಗೊಳಗಾಗಿದೆ. ಈಗ ರಾಷ್ಟ್ರಭಕ್ತಿಯ ಚಿಂತನೆಯ ಆರ್ಎಸ್ಎಸ್ನಿಂದಾಗಿ ಲೋಕಮುಖಿಯಾಗಿ ಬೆಳಗುತ್ತಿದೆ. ಇಡೀ ವಿಶ್ವವೇ ಭಾರತವನ್ನು ಮಾದರಿ ರಾಷ್ಟ್ರವಾಗಿ ನೋಡುತ್ತಿರುವುದು ಪರಿವರ್ತನೆಯ ಕಾಲಘಟ್ಟ’ ಎಂದು ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಮೂಲ್ಕಿ ಬಳಿಯ ಶೀನಪ್ಪಯ್ಯ ಕೋಡಿಯಲ್ಲಿ ಲೋಕಮುಖಿ ಟ್ರಸ್ಟ್ ನೇತೃತ್ವದಲ್ಲಿ ₹ 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಉದ್ದೇಶಿತ ಕಟ್ಟಡಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರುಯ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೀಲನಕ್ಷೆಯನ್ನು ಅನಾವರಣಗೊಳಿಸಿದರು. ‘ದೇಶ ಸೇವೆಗೆ ರಾಜಕೀಯವೇ ಬೇಕೆಂದಿಲ್ಲ. ಸಾಮಾನ್ಯ ವ್ಯಕ್ತಿ ಕೂಡ ಆರ್ಎಸ್ಎಸ್ ಸದಸ್ಯನಾಗಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು’ ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮನವಿ ಪತ್ರ ಬಿಡುಗಡೆಗೊಳಿಸಿದರು. ಮೂಲ್ಕಿ ಅರಸು ವಂಶಸ್ಥ ಎಂ.ದುಗ್ಗಣ್ಣ ಸಾವಂತರು, ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದ ಸೀತಾರಾಮ ಶೆಟ್ಟಿ, ಶಿಕ್ಷಣ ತಜ್ಞ ವೈ.ಎನ್.ಸಾಲಿಯಾನ್, ಟ್ರಸ್ಟ್ ಅಧ್ಯಕ್ಷ ಡಾ.ಭಾಸ್ಕರ ಭಟ್, ಸಂಚಾಲಕ ಸುನಿಲ್ ಆಳ್ವ ಮತ್ತಿತರರು ಇದ್ದರು.