ಮಂಗಳೂರು: ಇಲ್ಲಿನ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಹಮ್ಮಿಕೊಂಡಿರುವ ‘ಸಮರ್ಪಣಂ ಕಲೋತ್ಸವ’ವು ದೇವಾಲಯದ ಆವರಣದಲ್ಲಿ ಏ.13ರಂದು ನಡೆಯಲಿದೆ ಎಂದು ಪರಿಷತ್ ಗೌರವಾಧ್ಯಕ್ಷ ಸುಂದರ ಆಚಾರ್ಯ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಯೋಧ್ಯೆಯ ಶ್ರೀರಾಮಲಲ್ಲಾ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ‘ವಿಶ್ವಕರ್ಮ ಕುಲ ತಿಲಕ’ ಬಿರುದು ನೀಡಿ ಅಭಿನಂದಿಸಲಾಗುವುದು. ಬೆಳಿಗ್ಗೆ 9.45ಕ್ಕೆ ಟೆಂಪಲ್ ಸ್ಕ್ವೇರ್ ವೃತ್ತದಿಂದ ರಥಬೀದಿ ಮೂಲಕ ಅವರನ್ನು ಮೆರವಣಿಗೆಯಲ್ಲಿ ದೇವಾಲಯಕ್ಕೆ ಕರೆತರಲಾಗುತ್ತದೆ. 10.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಆನೆಗುಂದಿ ಮಹಾಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಉದ್ಘಾಟಿಸುವರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಕಲೋತ್ಸವಕ್ಕೆ ಚಾಲನೆ ನೀಡುವರು. ವಿಶ್ವಕರ್ಮ ಕಲಾ ಪರಿಷತ್ ಅಧ್ಯಕ್ಷ ಎಸ್.ಪಿ. ಗುರುದಾಸ್ ಅಧ್ಯಕ್ಷತೆ ವಹಿಸುವರು ಎಂದರು.
ಲಕ್ಷ್ಮಿನಾರಾಯಣ ಆಚಾರ್ಯ ಶುಭಾಶಂಸನೆ ಮಾಡುವರು. ಹಿರಿಯ ಸಾಧಕರು ಹಾಗೂ ಯುವ ಸಾಧಕರನ್ನು ಸನ್ಮಾನಿಸಲಾಗುವುದು ಕಲಾಕೃತಿಗಳ ಪ್ರದರ್ಶನ ನಡೆಯಲಿದೆ ಎಂದರು. ಎಂದರು.
ಸಂಘಟನೆ ಪದಾಧಿಕಾರಿಗಳಾದ ಪ್ರೊ.ಯಶವಂತ ಆಚಾರ್ಯ, ರತ್ನಾವತಿ ಜೆ.ಬೈಕಾಡಿ, ಎ.ಜಿ.ಸದಾಶಿವ, ರಮ್ಯಾ ಲಕ್ಷ್ಮೀಶ್, ಯಜ್ಞೇಶ್ ಆಚಾರ್ಯ ಇದ್ದರು.