ಮಂಗಳೂರು: ನಗರದ ಕಲ್ಕೂರ ಪ್ರತಿಷ್ಠಾನ ಮತ್ತು ಮಕ್ಕಿಮನೆ ಕಲಾವೃಂದದ ಆಶ್ರಯದಲ್ಲಿ ಶನಿವಾರ ಮಹಾತ್ಮ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೂಡುಬಿದಿರೆಯ ನೋಟರಿ ಶ್ವೇತಾ ಜೈನ್, ‘ಸತ್ಯ, ಶಾಂತಿ, ಅಹಿಂಸೆಯ ದಾರಿಯಲ್ಲಿ ನಾವು ಎಲ್ಲರೂ ಸಾಗೋಣ. ಎಲ್ಲರನ್ನೂ ಪ್ರೀತಿಯಿಂದ ಗೆಲ್ಲೋಣ’ ಎಂದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಅವರ ಸಂದೇಶಗಳು ಸ್ಫೂರ್ತಿದಾಯಕವಾಗಿವೆ’ ಎಂದರು.
ಮುಖ್ಯ ಅತಿಥಿ ನಟ ಭೋಜರಾಜ್ ವಾಮಂಜೂರು, ಉದ್ಯಮಿ ರತ್ನಾಕರ ಜೈನ್, ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುದೇಶ್ ಕುಮಾರ್, ಶ್ರೀರತ್ನ ಪ್ರತಿಷ್ಠಾನದ ಟ್ರಸ್ಟಿ ಮಾಧವ ಎಂ. ಎಸ್. ಶಿವಮೊಗ್ಗ, ಮಕ್ಕಿಮನೆ ಕಲಾವೃಂದದ ಸುದೇಶ್ ಜೈನ್ ಮಕ್ಕಿಮನೆ ಇದ್ದರು.
ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ಬಿಂದಿಯಾ ಎಲ್. ಶೆಟ್ಟಿ ಸುರತ್ಕಲ್ ಅವರನ್ನು ಸನ್ಮಾನಿಸಲಾಯಿತು. ಮಕ್ಕಿಮನೆ ಕಲಾವೃಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಸಿದ್ದ ಕೃಷ್ಣ ವೇಷ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಮತ್ತು ನವರಾತ್ರಿ ದಸರಾ ಮಹೋತ್ಸವದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಚಿರಾಗ್ ಬಜಾಲ್, ಅಪೇಕ್ಷಾ ಎ., ಪ್ರತೀಕ್ಷಾ ಎ., ಶ್ರೇಯಾ ಭಟ್, ಸಂತೋಷ್ ಕುಮಾರ್ ಕುಳಾಯಿ, ರಮೇಶ್ ಮಂಗಳೂರು, ಶಿಖಾ ಸಾಲ್ಯಾನ್ ಇದ್ದರು.